ಬಾಗಲಕೋಟೆ: ಬಯಲುಸೀಮೆ ಬಾಗಲಕೋಟೆ ಜಿಲ್ಲೆಯಲ್ಲಿ ಮಧ್ಯಪ್ರದೇಶ ಮೂಲದ ಕಪ್ಪು ಸುಂದರಿ ಎಂದು ಹೆಸರುವಾಸಿಯಾಗಿರುವ ಕಪ್ಪು ಗೋಧಿಯನ್ನು ಬೆಳೆದ ಪ್ರಥಮ ರೈತ ಎಂಬ ಕೀರ್ತಿಗೆ ಕೃಷಿಕ ಧರೆಪ್ಪ ಕಿತ್ತೂರ ರಾಜ್ಯದಲ್ಲಿ ಸುದ್ದಿಯಲ್ಲಿದ್ದಾರೆ.
ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿಯ ಸಾವಯವ ಕೃಷಿಕರಾಗಿರುವ ಧರೆಪ್ಪ ಕಿತ್ತೂರ ಅವರು ಕೃಷಿಯಲ್ಲಿ ಅನೇಕ ರೀತಿಯ ಪ್ರಯೋಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಮೊದಲು ಅವರು ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಕಪ್ಪು ಗೋಧಿಯನ್ನು ತಮ್ಮ ಜಮೀನಿನಲ್ಲಿ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬಯಲು ಸೀಮೆಯಲ್ಲಿ ಔಷಧಿ ಗುಣವುಳ್ಳ ಕಪ್ಪು ಗೋಧಿಯನ್ನು ಬೆಳೆಯುವುದರ ಮೂಲಕ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಉತ್ತರ ಕರ್ನಾಟಕದ ರೈತರನ್ನು ಆಶ್ಚರ್ಯಚಕಿತರನ್ನಾಗಿಸಿದ್ದಾರೆ.
ಅವರು ತಮ್ಮ ಜಮೀನಿನಲ್ಲಿ ಬೆಳೆದ ಕಪ್ಪು ಗೋಧಿಯು ಫಲ ಕೊಡುವ ಒಟ್ಟು ಪ್ರಕ್ರಿಯೆಗೆ 110 ದಿನಗಳು ತಗುಲಿದೆ ಎಂದು ತಿಳಿಸಿದ್ದಾರೆ. ಇವರ ಈ ವಿನೂತನ ಪ್ರಯತ್ನವನ್ನು ಗಮನಿಸಿದ ಸ್ಥಳೀಯ ರೈತರು ತಾವು ಕೂಡ ಈ ಬೆಳೆಯನ್ನು ಉತ್ಪಾದಿಸಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಕಪ್ಪು ಗೋಧಿ ಉತ್ತಮ ಔಷಧೀಯ ಅಂಶಗಳನ್ನು ಹೊಂದಿದೆ ಎನ್ನಲಾಗಿದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನ ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಒಳಗೊಂಡಿರುವ ಈ ಬೆಳೆಗೆ ಬಲು ಬೇಡಿಕೆ ಇದ್ದು ಇದು ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ಬಿಪಿ ಇರುವಂತಹ ರೋಗಿಗಳಿಗೆ ಇದು ರಾಮಬಾಣವಾಗಿದೆ.
ಧರೆಪ್ಪ ಅವರು ಕೃಷಿಯಲ್ಲಿ ವಿಶೇಷ ಪಾಂಡಿತ್ಯವನ್ನು ಹೊಂದಿದ್ದಾರೆ. ಕೃಷಿಯಲ್ಲಿನ ತಮ್ಮ ಸಾಧನೆಗಳ ಮೂಲಕವೇ ಅನೇಕ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈವರೆಗೆ ಅವರಿಗೆ ಒಟ್ಟು 5 ರಾಷ್ಟ್ರೀಯ ಪ್ರಶಸ್ತಿಗಳೂ ದೊರಕಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.