ಬೆಂಗಳೂರು: ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಅನೇಕ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತರುತ್ತಿವೆ. ಕೊರೋನಾ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ 4 ಲಕ್ಷ ಡೋಸ್ಗಳಷ್ಟು ಕೊರೋನಾ ಲಸಿಕೆಯನ್ನು ರವಾನೆ ಮಾಡಿದೆ. ರಾಜ್ಯಕ್ಕೆ ಇನ್ನೂ 12 ಲಕ್ಷ ಡೋಸ್ಗಳಷ್ಟು ಕೊರೋನಾ ಲಸಿಕೆ ಶೀಘ್ರದಲ್ಲೇ ಬರಲಿರುವುದಾಗಿ ಮೂಲಗಳು ತಿಳಿಸಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಡಾ ಕೆ ಸುಧಾಕರ್ ಅವರು, ಲಸಿಕೆ ಹಾಕಿಸಿ ಮುನ್ನೆಚ್ಚರಿಕೆಯೂ ಪಾಲಿಸಿ. ಕಳೆದ ವರ್ಷ ಕೊರೊನಾ ವೈರಾಣುವಿನ ಮೊದಲ ಅಲೆ ಅಪ್ಪಳಿಸಿದಾಗ ಲಸಿಕೆ ನಮಗೆ ಒಂದು ಆಶಾಕಿರಣವಾಗಿತ್ತು. ಆದರೆ ಈಗ ಅದು ವಾಸ್ತವವಾಗಿದೆ. ಇದು ಅಷ್ಟು ಸಾಮಾನ್ಯವಾದ ವಿಷಯವಲ್ಲ, ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಇದರ ಹಿಂದೆ ನಮ್ಮ ವಿಜ್ಞಾನಿಗಳ ಅಚಲ ತಪಸ್ಸು, ಕಠಿಣ ಪರಿಶ್ರಮ, ನಿರಂತರ ಪ್ರಯತ್ನಗಳಿವೆ. ಉದಾಹರಣೆಗೆ ರೋಟಾ ವೈರಸ್ ಗೆ ಲಸಿಕೆ ಸಿಗಲು 29 ವರ್ಷ ಬೇಕಾಯ್ತು. ಎಬೋಲಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು 20 ವರ್ಷ ಕಾಯಬೇಕಾಯ್ತು. ಕೊರೊನಾ ಲಸಿಕೆ ಬರುವ ಮುನ್ನ, ಮಂಪ್ಸ್ ವೈರಸ್ ಗೆ 4 ವರ್ಷದಲ್ಲಿ ಲಸಿಕೆ ಕಂಡುಹಿಡಿದಿದ್ದೇ ಈವರೆಗೂ ನಮಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ಲಸಿಕೆಯಾಗಿತ್ತು. ಈಗ ಕೊರೊನಾ ವೈರಸ್ ಗೆ 1 ವರ್ಷದೊಳಗೆ ಲಸಿಕೆ ಕಂಡುಹಿಡಿಯಲಾಗಿದೆ. ಇಂತಹ ಕಠಿಣ ಪರಿಶ್ರಮದ ಪ್ರತಿಫಲವಾದ ಲಸಿಕೆ ನಮಗೆ ದೊರೆತಿರುವಾಗ ಅದರ ಲಾಭ ಪಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.
ಲಸಿಕೆ ಪಡೆದುಕೊಂಡ ವ್ಯಕ್ತಿ ತಾನು ಸೋಂಕಿನಿಂದ ಸುರಕ್ಷಿತವಾಗುವುದರ ಜೊತೆಗೆ ಇತರರ ಸುರಕ್ಷತೆಗೂ ಸಹಕಾರಿಯಾಗುವುದರಿಂದ, ಲಸಿಕೆ ಪಡೆಯುವುದು ನಮ್ಮ ಸುರಕ್ಷತೆ ಜೊತೆಗೆ ಒಂದು ಸಾಮೂಹಿಕ ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಆದ್ದರಿಂದ ಎಲ್ಲ ಅರ್ಹ ವ್ಯಕ್ತಿಗಳು ಈ ಕೂಡಲೇ cowin.gov.in ಅಥವಾ ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಸಿಕೊಂಡು ಅಥವಾ ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ತಪ್ಪದೆ ಲಸಿಕೆ ಪಡೆಯಬೇಕೆಂದು ಮನವಿ ಮಾಡುತ್ತೇನೆ. ತಮ್ಮ ಮನೆಯಲ್ಲಿ, ನೆರೆಹೊರೆಯಲ್ಲಿ, ಸ್ನೇಹಿತರಲ್ಲಿ ಬಂಧು-ಬಳಗದಲ್ಲಿರುವ ಎಲ್ಲ ಅರ್ಹ ವ್ಯಕ್ತಿಗಳಿಗೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರೀಕರಿಗೆ ಮತ್ತು ಸಹ-ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ಪಡೆಯಲು ಅರಿವು ಮೂಡಿಸಿ, ಪ್ರೋತ್ಸಾಹಿಸಿ, ಸಹಾಯ ಮಾಡಿರಿ. ನಾವೆಲ್ಲರೂ ಒಗ್ಗಟ್ಟಿನಿಂದ ಕರ್ನಾಟಕವನ್ನು ಕೊರೊನಾ ಮುಕ್ತ ರಾಜ್ಯವನ್ನಾಗಿ ಮಾಡೋಣ ಎಂದು ಹೇಳಿದ್ದಾರೆ.
ನೆನ್ನೆ ತಡರಾತ್ರಿ ರಾಜಕ್ಕೆ 4 ಲಕ್ಷ ಡೋಸ್ ಕೊರೊನಾ ಲಸಿಕೆ ಆಗಮಿಸಿದ್ದು, ಕೇಂದ್ರ ಸರ್ಕಾರದ ಭರವಸೆಯಂತೆ ಈ ವಾರದೊಳಗೆ ಇನ್ನೂ 12 ಲಕ್ಷ ಡೋಸ್ ಲಸಿಕೆ ರವಾನೆಯಾಗಲಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಸಿಕೆಯ ಕೊರತೆ ಉಂಟಾಗದಂತೆ ಕ್ರಮ ಕೈಗೊಂಡಿದ್ದು,ಎಲ್ಲ ಅರ್ಹ ನಾಗರೀಕರು ಕೂಡಲೇ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯಬೇಕೆಂದು ಕೋರುತ್ತೇನೆ.
— Dr Sudhakar K (@mla_sudhakar) March 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.