ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಸಭೆಯಲ್ಲಿ ಸಂಸ್ಕೃತ ಅನುರಣಿಸಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಶುಕ್ಲಾ ಯಜುರ್ವೇದದ ಒಂದು ಸಣ್ಣ ಶ್ಲೋಕದೊಂದಿಗೆ ಸಭೆಯಲ್ಲಿ ಭಾರತದ ಭಾಷಣವನ್ನು ಆರಂಭ ಮಾಡಿದರು.
ಹವಾಮಾನ ಬದಲಾವಣೆ ಮತ್ತು ವಿಶ್ವ ಶಾಂತಿಗೆ ಅದರ ಪರಿಣಾಮಗಳ ಕುರಿತು ಯುಎನ್ಎಸ್ಸಿ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಜಾವಡೇಕರ್, ಶುಕ್ಲಾ ಯಜುರ್ವೇದದ ಸಂಸ್ಕೃತ ಸ್ತೋತ್ರದ ಅರ್ಥವನ್ನೂ ತಿಳಿಸಿದರು.
“ಬಾಹ್ಯಾಕಾಶ, ಆಕಾಶ, ಭೂಮಿಯಲ್ಲಿ ಸಮತೋಲನ ಇರಲಿ! ಸಸ್ಯಗಳಲ್ಲಿ, ಮರಗಳಲ್ಲಿ ಬೆಳವಣಿಗೆ ಇರಲಿ! ದೇವರ ಅನುಗ್ರಹ ಮತ್ತು ಆತ್ಮದಲ್ಲಿ ಆನಂದ ಇರಲಿ. ಎಲ್ಲದರಲ್ಲೂ ಸಮತೋಲನವಿರಿ ಮತ್ತು ಅಂತಹ ಶಾಂತಿ ನಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಇರಲಿ! ವೇದದ ಈ ಸಂದೇಶದಿಂದ ಪರಿಸರವು ಎಲ್ಲಾ ಜೀವಿಗಳಿಗೆ ಸೇರಿದೆ ಎಂಬುದು ಸ್ಪಷ್ಟವಾಗುತ್ತದೆ, ಆದ್ದರಿಂದ ಇದರ ರಕ್ಷಣೆ ಎಲ್ಲರ ಕರ್ತವ್ಯ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಅಗತ್ಯ” ಎಂದು ಜಾವ್ಡೇಕರ್ ತಮ್ಮ ಸಂಸ್ಕೃತ ಶ್ಲೋಕವನ್ನು ಅನುವಾದಿಸಿದರು.
“ಮಹಿಳೆಯರು ಹೆಚ್ಚಾಗಿ ತಮ್ಮ ಕುಟುಂಬಗಳಿಗೆ ಆಹಾರ, ನೀರು ಮತ್ತು ಶಕ್ತಿಯನ್ನು ಒದಗಿಸುವವರಾಗಿರುವುದರಿಂದ ಹವಾಮಾನ ಬದಲಾವಣೆಯಿಂದಾಗಿ ಸಂಪನ್ಮೂಲಗಳನ್ನು ಪ್ರವೇಶಿಸುವಲ್ಲಿ ಅವರು ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಜಾವ್ಡೇಕರ್ ಸಭೆಯಲ್ಲಿ ಹೇಳಿದ್ದಾರೆ.
ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಭಾರತದ ಪಾತ್ರವನ್ನು ಹಂಚಿಕೊಂಡ ಜಾವ್ಡೇಕರ್, “ಜಿ 20 ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆ ತಗ್ಗಿಸುವಿಕೆಯ ಬದ್ಧತೆಗಳನ್ನು ಪೂರೈಸುವ ಏಕೈಕ ದೇಶ ಭಾರತವಾಗಿದೆ. ನಾವು ನಮ್ಮ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸುವುದು ಮಾತ್ರವಲ್ಲದೆ ಅವುಗಳನ್ನು ಮೀರಿ ಮುನ್ನಡೆಯಲಿದ್ದೇವೆ. ಭಾರತವು ಪ್ರಸ್ತುತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಸೌರಶಕ್ತಿ ಕಾರ್ಯಕ್ರಮವನ್ನು ಹೊಂದಿದೆ. ನಾವು 80 ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ಅಡುಗೆ ಇಂಧನ ಪ್ರವೇಶವನ್ನು ವಿಸ್ತರಿಸಿದ್ದೇವೆ. ಇದು ಜಾಗತಿಕವಾಗಿ ಅತಿದೊಡ್ಡ ಶುದ್ಧ ಶಕ್ತಿ ಅಭಿಯಾನಗಳಲ್ಲಿ ಒಂದಾಗಿದೆ” ಎಂದಿದ್ದಾರೆ.
ಮತ್ತೊಂದು ಸಂಸ್ಕೃತ ಶ್ಲೋಕದೊಂದಿಗೆ ಮಾತು ಕೊನೆಗೊಳಿಸಿದ ಅವರು, “ಎಲ್ಲಾ ಸಂವೇದನಾಶೀಲ ಜೀವಿಗಳು ಶಾಂತಿಯಿಂದ ಇರಲಿ, ಯಾರೂ ಅನಾರೋಗ್ಯದಿಂದ ಬಳಲದಿರಲಿ, ಎಲ್ಲರೂ ಶುಭವನ್ನು ನೋಡಲಿ, ಯಾರೂ ತೊಂದರೆ ಅನುಭವಿಸಬಾರದು. ಶಾಂತಿ, ಶಾಂತಿ, ಶಾಂತಿ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.