ನವದೆಹಲಿ: ದೇಶದ ಜನರಿಗೆ ಕೈಗೆಟುಕುವ ದರದಲ್ಲಿ ವಸತಿಗಳನ್ನು ನಿರ್ಮಾಣ ಮಾಡಿಕೊಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ಲೈಟ್ ಹೌಸ್ ಯೋಜನೆಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಗೃಹ ನಿರ್ಮಾಣದಲ್ಲಿ ತಂತ್ರಜ್ಞಾನ, ವೆಚ್ಚಗಳ ಬಗ್ಗೆ ಹಿಂದಿನ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಇವುಗಳ ಬಗ್ಗೆ ಗಮನ ಹರಿಸಿದೆ ಎಂದ ಅವರು, 2022ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕ ಕೂಡ ವಸತಿ ಹೊಂದುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂಬುದನ್ನು ಪುನರುಚ್ಛರಿಸಿದರು.
ಕೈಗೆಟಕುವ ದರದಲ್ಲಿ ಸ್ಥಿರವಾದ ಮನೆಗಳನ್ನು ನಿರ್ಮಿಸಿಕೊಡುವ ಆಶಾ-ಭಾರತ ಯೋಜನೆ ದೇಶದಲ್ಲಿ ಮುಂದುವರಿದಿದ್ದು, ಆಧುನಿಕ ತಂತ್ರಜ್ಞಾನಗಳ ಮೂಲಕ ಮನೆಗಳನ್ನು ನಿರ್ಮಿಸಿಕೊಡುವ ಕೆಲಸಕ್ಕೆ ಸಂಶೋಧನೆ ಮತ್ತು ಸ್ಟಾರ್ಟ್ ಅಪ್ ಉದ್ಯಮಗಳ ಪ್ರಚಾರ ನಡೆಯುತ್ತಿದೆ ಎಂದಿದ್ದಾರೆ.
ಲೈಟ್ ಹೌಸ್ ಯೋಜನೆಗಳು
ಲೈಟ್ ಹೌಸ್ ಯೋಜನೆಗಳು (ಎಲ್ಎಚ್ಪಿಗಳು) ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸ-ಯುಗದ ಪರ್ಯಾಯ ಜಾಗತಿಕ ತಂತ್ರಜ್ಞಾನಗಳು, ವಸ್ತುಗಳು ಮತ್ತು ಪ್ರಕ್ರಿಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಂಡಿವೆ. ಅವುಗಳನ್ನು ಜಿಎಚ್ಟಿಸಿ-ಇಂಡಿಯಾ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ವಸತಿ ನಿರ್ಮಾಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳನ್ನು ಸಮಗ್ರ ರೀತಿಯಲ್ಲಿ ಅಳವಡಿಸಿಕೊಳ್ಳಲು ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇಂದೋರ್ (ಮಧ್ಯಪ್ರದೇಶ), ರಾಜ್ಕೋಟ್ (ಗುಜರಾತ್), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ್), ಅಗರ್ತಲಾ (ತ್ರಿಪುರ) ಮತ್ತು ಲಕ್ನೋ (ಉತ್ತರ ಪ್ರದೇಶ) ಗಳಲ್ಲಿ ಎಲ್ಎಚ್ಪಿಗಳನ್ನು ನಿರ್ಮಿಸಲಾಗುತ್ತಿದೆ. ಸಂಬಂಧಿತ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಪ್ರತಿ ಸ್ಥಳದಲ್ಲಿ ಸುಮಾರು 1000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸಾಂಪ್ರದಾಯಿಕ ಇಟ್ಟಿಗೆ ಮತ್ತು ಗಾರೆ ನಿರ್ಮಾಣಕ್ಕೆ ಹೋಲಿಸಿದರೆ ಈ ಯೋಜನೆಗಳು ಹನ್ನೆರಡು ತಿಂಗಳಲ್ಲಿಯೇ ವಾಸಿಸಲು ಸಿದ್ಧವಾದ ಮನೆಗಳನ್ನು ನಿರ್ಮಿಸುತ್ತವೆ. ಇವು ಉತ್ತಮ ಗುಣಮಟ್ಟದ, ಬಾಳಿಕೆ ಬರುವ, ಕಡಿಮೆ ವೆಚ್ಚದ, ಸುಸ್ಥಿರ ಮನೆಗಳಾಗಿರುತ್ತವೆ.
ಈ ಎಲ್ಎಚ್ಪಿಗಳು ತಂತ್ರಜ್ಞಾನಗಳ ವೈವಿಧ್ಯತೆಯನ್ನು ಪ್ರದರ್ಶಿಸಲಿವೆ. ಇಂದೋರ್ನ ಎಲ್ಎಚ್ಪಿಯಲ್ಲಿ ಪ್ರಿಫ್ಯಾಬ್ರಿಕೇಟೆಡ್ ಸ್ಯಾಂಡ್ವಿಚ್ ಪ್ಯಾನಲ್ ಸಿಸ್ಟಮ್, ರಾಜ್ಕೋಟ್ನಲ್ಲಿ ಮೊನೊಲಿಥಿಕ್ ಕಾಂಕ್ರೀಟ್ ನಿರ್ಮಾಣ, ಚೆನ್ನೈ ಎಲ್ಎಚ್ಪಿಯಲ್ಲಿ ಪ್ರಿಕಾಸ್ಟ್ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆ, ರಾಂಚಿಯ ಎಲ್ಎಚ್ಪಿಯಲ್ಲಿ 3 ಡಿ ವಾಲ್ಯೂಮೆಟ್ರಿಕ್ ಪ್ರಿಕಾಸ್ಟ್ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆ, ಅಗರ್ತಲಾದಲ್ಲಿ ಲೈಟ್ ಗೇಜ್ ಸ್ಟೀಲ್ ಇನ್ಫಿಲ್ ಪ್ಯಾನೆಲ್ಗಳೊಂದಿಗೆ ಸ್ಟೀಲ್ ಫ್ರೇಮ್ ಮತ್ತು ಲಕ್ನೋ ಎಲ್ಎಚ್ಪಿಯಲ್ಲಿ ಪಿವಿಸಿ ಸ್ಟೇ ಇನ್ ಪ್ಲೇಸ್ ಫಾರ್ಮ್ವರ್ಕ್ ಸಿಸ್ಟಮ್ ತಂತ್ರಜ್ಞಾನಗಳನ್ನು ಬಳಸಲಾಗುವುದು. ವಸತಿ ಕ್ಷೇತ್ರಕ್ಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಮತ್ತು ತಂತ್ರಜ್ಞಾನದ ಪುನರಾವರ್ತನೆಗೆ ಅನುಕೂಲವಾಗುವಂತೆ ಎಲ್ಎಚ್ಪಿಗಳು ನೇರ ಪ್ರಯೋಗಾಲಯಗಳಾಗಿ ಕಾರ್ಯನಿರ್ವಹಿಸುತ್ತವೆ. ಐಐಟಿಗಳು, ಎನ್ಐಟಿಗಳು, ಇತರ ಎಂಜಿನಿಯರಿಂಗ್ ಕಾಲೇಜುಗಳು, ಯೋಜನೆ ಮತ್ತು ವಾಸ್ತುಶಿಲ್ಪ ಕಾಲೇಜುಗಳು, ಬಿಲ್ಡರ್ ಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ವೃತ್ತಿಪರರು ಮತ್ತು ಇತರ ಸಂಸ್ಥೆಗಳ ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಯೋಜನೆ, ವಿನ್ಯಾಸ, ಉತ್ಪಾದನೆ, ನಿರ್ಮಾಣ ಕ್ರಮ ಮತ್ತು ಪರೀಕ್ಷೆಗಳು ಇದರಲ್ಲಿ ಸೇರಿವೆ.
ಆಶಾ-ಭಾರತ
ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕಗಳು – ಭಾರತ (ಆಶಾ-ಇಂಡಿಯಾ) ಭವಿಷ್ಯದ ಸಂಭಾವ್ಯ ತಂತ್ರಜ್ಞಾನಗಳಿಗೆ ಪ್ರೋತ್ಸಾಹ ಮತ್ತು ವೇಗವರ್ಧಕ ಬೆಂಬಲವನ್ನು ನೀಡುವ ಮೂಲಕ ದೇಶೀಯ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಆಶಾ-ಇಂಡಿಯಾ ಉಪಕ್ರಮದ ಅಡಿಯಲ್ಲಿ, ಪ್ರೋತ್ಸಾಹ ಮತ್ತು ವೇಗವರ್ಧಕ ಬೆಂಬಲವನ್ನು ಒದಗಿಸಲು ಐದು ಆಶಾ-ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೇಗವರ್ಧನೆ ತಂತ್ರಜ್ಞಾನದ ವಿಜೇತರನ್ನು ಪ್ರಧಾನಿಯವರು ಘೋಷಿಸಲಿದ್ದಾರೆ. ಈ ಉಪಕ್ರಮದ ಮೂಲಕ ಗುರುತಿಸಲಾದ ತಂತ್ರಜ್ಞಾನಗಳು, ಪ್ರಕ್ರಿಯೆಗಳು ಮತ್ತು ವಸ್ತುಗಳು ಸೃಜನಶೀಲ ಯುವಕರು, ನವೋದ್ಯಮಗಳು, ಅನುಶೋಧನಾಗಾರರು ಮತ್ತು ಉದ್ಯಮಿಗಳಿಗೆ ಪ್ರಮುಖವಾದ ಬೆಂಬಲ ಒದಗಿಸುತ್ತವೆ.
ಪಿಎಂಎವೈ-ಯು ಮಿಷನ್
“2022 ರ ವೇಳೆಗೆ ಎಲ್ಲರಿಗೂ ವಸತಿ” ಎಂಬ ದೃಷ್ಟಿಕೋನದ ಸಾಧನೆಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (ಪಿಎಂಎವೈ-ಯು) ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಫಲಾನುಭವಿಗಳ ಅತ್ಯುತ್ತಮ ಕೊಡುಗೆಯನ್ನು ಗುರುತಿಸುವ ಸಲುವಾಗಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪಿಎಂಎವೈ-ನಗರ ಅನುಷ್ಠಾನದಲ್ಲಿನ ಶ್ರೇಷ್ಠತೆಗಾಗಿ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ ಪಿಎಂಎವೈ (ನಗರ) 2019ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.