ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಸಿಬಿಐ ಈ ದಾಳಿ ನಡೆಸಿದೆ. ಬೆಂಗಳೂರಿನ ಡಿಕೆಶಿ ಮನೆ ಸೇರಿದಂತೆ ಸುಮಾರು 16 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 2019 ರ ಸೆಪ್ಟೆಂಬರ್ ತಿಂಗಳಲ್ಲಿಯೂ ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯ ಬಂಧನಕ್ಕೆ ಒಳಪಡಿಸಿತ್ತು. ಬಳಿಕ ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಈ ಸಂಬಂಧ ಇಂದು ಸಿಬಿಐ ಅಧಿಕಾರಿಗಳು ಡಿಕೆಶಿ ಬ್ರದರ್ಸ್ಗೆ ಸಂಬಂಧಿಸಿದಂತೆ ಇರುವ ಪ್ರದೇಶಗಳಲ್ಲಿ ಏಕಾಏಕಿ ದಾಳಿ ನಡೆಸಿ ಪರಿಶೀಲನೆ ಮಾಡಿದೆ.
ಡಿಕೆಶಿ ಸಹೋದರ ಸಂಸದ ಡಿಕೆ ಸುರೇಶ್ ಅವರ ದೆಹಲಿಯ ಮನೆ ಮೇಲೆಯೂ ಸಿಬಿಐ ದಾಳಿ ಮಾಡಿದೆ. ಜೊತೆಗೆ ನವದೆಹಲಿಯ ಸಫರ್ಜಂಗ್ ಎನ್ಕ್ಲೇವ್ನಲ್ಲಿನ ಡಿಕೆಶಿ ಅವರ ಫ್ಲ್ಯಾಟ್ಗಳ ಮೇಲೆಯೂ ಸಿಬಿಐ ದಾಳಿ ಮಾಡಿದೆ. ಜೊತೆಗೆ ಡಿಕೆಶಿ ಹುಟ್ಟೂರಾದ ಕನಕಪುರದ ದೊಡ್ಡಾಲಹಳ್ಳಿ ಗ್ರಾಮದ ಅವರ ನಿವಾಸ, ಕೋಡಿಹಳ್ಳಿಯಲ್ಲಿನ ಡಿಕೆ ಸಹೋದರರ ಮನೆ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಜೊತೆಗೆ ಮುಂಬೈನಲ್ಲಿ ರುವ ಡಿಕೆಶಿ ಅವರ ಪ್ರಾಪರ್ಟಿಗಳ ಮೇಲೂ ದಾಳಿ ನಡೆಸಿ ಸಿಬಿಐ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಿಬಿಐ ದಾಳಿಯ ಸಂದರ್ಭದಲ್ಲಿ ಡಿಕೆಶಿ ಮನೆಯಲ್ಲಿ 50 ಲಕ್ಷ ರೂ. ಕ್ಯಾಷ್ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಾಗೆಯೇ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ನ ಬೆಂಗಳೂರು ಘಟಕದಲ್ಲಿ ಎಫ್ ಐಆರ್ ಸಹ ದಾಖಲು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.