ಬೆಂಗಳೂರು: ಕೊರೋನಾ ಸೋಂಕಿತರ ಹೆಸರನ್ನು ಸಾಮಾಜಿಕ ಮಾಧ್ರಮಗಳು ಅಥವಾ ಸಾರ್ವಜನಿಕವಾಗಿ ಬಳಕೆ ಮಾಡಬಾರದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೊರೋನಾ ಸೋಂಕು ತಗುಲಿದವರಲ್ಲಿ ಹಲವು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಸೋಂಕಿತರಿಗೆ ಸಾರ್ವಜನಿಕ ಬೆಂಬಲ ಅತೀ ಅಗತ್ಯ. ಕಾಯಿಲೆಯಿಂದ ಗುಣಪಡಿಸಿಕೊಂಡ ವ್ಯಕ್ತಿಯ ಜೊತೆಗೆ ಜನರು ಯಾವುದೇ ಭಯವಿಲ್ಲದೆ ಮಾತನಾಡಬಹುದಾಗಿದೆ. ಸೋಂಕಿನಿಂದ ಗುಣಮುಖರಾದವರನ್ನು ಸಾಮಾಜಿಕವಾಗಿ ಬೇರೆಯೇ ಇಡುವುದು, ಅವರನ್ನು ಸಂದೇಹದಿಂದ ನೋಡುವುದು ಸರಿಯಾದ ಕ್ರಮವಲ್ಲ. ಜೊತೆಗೆ ಕೊರೋನಾ ಸೋಂಕು ನಿವಾರಣೆಗೆ ಪ್ರಯತ್ನ ಮಾಡುತ್ತಿರುವ ಕೊರೋನಾ ವಾರಿಯರ್ಸ್ಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಾಮಾಜಿಕವಾಗಿ ಕೊರೋನಾ ಕುರಿತಂತೆ ಜನರಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಇದರಿಂದಾಗಿ ಸೋಂಕು ತಗುಲಿ ಚೇತರಿಸಿಕೊಂಡವರನ್ನು ಅವರು ಪ್ರತ್ಯೇಕವಾಗಿ ನೋಡುತ್ತಿದ್ದಾರೆ. ಇದರಿಂದ ಕೊರೋನಾ ನಿಯಂತ್ರಣಕ್ಕೂ ಸಮಸ್ಯೆ ಉಂಟಾಗುತ್ತದೆ. ಇಂತಹ ತಪ್ಪು ಕಲ್ಪನೆಯನ್ನು ನಿವಾರಿಸಲು ಪೂರಕ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ಇನ್ನು ಜನರು ಹೇಗೆಲ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗೆಗೂ ಆಯುಷ್ ಇಲಾಖೆ ಸಲಹೆ ನೀಡಿದೆ. ಬಿಸಿ ನೀರು ಸೇವನೆ, ಪ್ರತಿನಿತ್ಯ ಕನಿಷ್ಟ 30 ನಿಮಿಷ ಯೋಗ, ವ್ಯಾಯಾಮ ಮಾಡುವುದು, ಆಹಾರ ಪದಾರ್ಥಗಳಲ್ಲಿ ಅರಶಿನ, ಜೀರಿಗೆ, ಧನಿಯಾ, ಬೆಳ್ಳುಳ್ಳಿ ಬಳಕೆ, ಅರಶಿನ ಮಿಶ್ರಿತ ಹಾಲು ಸೇವನೆ, ಗಿಡಮೂಲಿಕೆಗಳ ಚಹಾ ಸೇವನೆ, ಪುದೀನಾ ನೀರಿನ ಹಬೆ ತೆಗೆದುಕೊಳ್ಳುವುದು, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ತುಪ್ಪ ಯಾವುದಾದರೊಂದನ್ನು ಪ್ರತಿನಿತ್ಯ ದಿನಕ್ಕೆ ಎರಡು ಬಾರಿ ಮೂಗಿನ ಹೊಳ್ಳೆಗಳಿಗೆ ಹಚ್ಚುವುದು, ಒಂದು ಟೀ ಸ್ಪೂನ್ ತೆಂಗಿನೆಣ್ಣೆಯನ್ನು ಅಥವಾ ಎಳ್ಳೆಣ್ಣೆ ಯನ್ನು 2-3 ನಿಮಿಷ ಬಾಯಲ್ಲಿರಿಸಿ, ಬಳಿಕ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದು, ಕೆಮ್ಮುವಾಗ, ಗಂಟಲು ಕಿರಿಕಿರಿಗೆ ಲವಂಗವನ್ನು ಸಕ್ಕರೆ ಅಥವಾ ಜೇನು ತುಪ್ಪದಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸುವುದನ್ನು ಮಾಡಿದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ, ಸೋಂಕು ನಿವಾರಕ ಶಕ್ತಿ ಹೆಚ್ಚುತ್ತದೆ ಎಂದು ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.