ಬೆಂಗಳೂರು: ರಾಮನಗರ ಜಿಲ್ಲೆಯ ಮೂರು ಗ್ರಾಮಗಳು ಮತ್ತು ಎರಡು ಕುಗ್ರಾಮಗಳಿಗೆ ಸಂಬಂಧಿಸಿದಂತೆ 121 ಮನೆಗಳ ಮಾಲಿಕರು ಸ್ವಾಮಿತ್ವ ಯೋಜನೆಯಡಿಯಲ್ಲಿ ಆಸ್ತಿ ಹಕ್ಕು ಪತ್ರಗಳನ್ನು ಪಡೆಯಲಿದ್ದಾರೆ. ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ.
ಪ್ರಧಾನ ಮಂತ್ರಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಯಡಿಯಲ್ಲಿ ದೇಶದ ಆರು ರಾಜ್ಯಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಕರ್ನಾಟಕವೂ ಸೇರಿದೆ. ಈ ಯೋಜನೆಯ ಪ್ರಕಾರ ಆಧಾರ್ ಕಾರ್ಡ್ನಂತೆಯೇ ಆಸ್ತಿ ಹೊಂದಿದವರಿಗೆ ಸ್ವಾಮಿತ್ವ ಕಾರ್ಡ್ ಸಹ ದೊರೆಯಲಿದೆ. ಸುಧಾರಿತ ತಂತ್ರಜ್ಞಾನ ಬಳಸಿ ಗ್ರಾಮಗಳ ಸಮೀಕ್ಷೆ ಮತ್ತು ಮ್ಯಾಪಿಂಗ್ ಮಾಡುವ ಮೂಲಕ ಗ್ರಾಮೀಣ ಆಸ್ತಿಗಳ ಜಿಯೋಸ್ಪೇಷಿಯಲ್ ಡಾಟಾಬೇಸ್ ದತ್ತಾಂಶಗಳನ್ನು ರಚಿಸಲಾಗುತ್ತದೆ. ಇದೊಂದು ಮಹತ್ವದ ಯೋಜನೆಯಾಗಿದ್ದು ಭಾರತದ ರಾಷ್ಟ್ರೀಯ ಸಮೀಕ್ಷೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಡ್ರೋನ್ ಸಮೀಕ್ಷೆ ನಡೆಸಿ ವರದಿ ತಯಾರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್ಡಿಪಿಆರ್ ಕಾರ್ಯದರ್ಶಿ, ಪಂಚಾಯತ್ನ ಕಂದಾಯ ಅಧಿಕಾರಿಗಳು ಮನೆಗಳಿಗೆ ಪ್ರತ್ಯೇಕ ಭೇಟಿಯ ಮೂಲಕವೂ ಮಾಹಿತಿ ಸಂಗ್ರಹಿಸಲಿದ್ದಾರೆ. ತಂತ್ರಜ್ಞಾನ ಬಳಸಿಕೊಂಡು ಸ್ವಾಮಿತ್ವ ಯೋಜನೆಯಡಿಯಲ್ಲಿ ಗುರುತಿನ ಸಂಖ್ಯೆ, ಕಾರ್ಡ್ಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂಬಂಧ ರಾಮನಗರ ಜಿಲ್ಲೆಯ 121 ಮನೆಗಳ ಗುರುತಿಸುವಿಕೆ, ವರದಿ ತಯಾರಿಕೆ ಕೆಲಸಗಳೆಲ್ಲವೂ ಸಂಪೂರ್ಣವಾಗಿದ್ದು, ಅಕ್ಟೋಬರ್ 11 ರಂದು ಪ್ರಧಾನಿ ಮೋದಿ ಅವರು ಇದನ್ನು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಜೊತೆಗೆ ಸ್ವಾಮಿತ್ವ ಕಾರ್ಡ್ಗೆ ಆಧಾರ್ ಕಾರ್ಡ್ನಂತೆಯೇ ಸಂಖ್ಯೆಗಳು ಸಿಗಲಿವೆ. ಇದರಿಂದಾಗಿ ಪಂಚಾಯತ್ಗಳಿಗೆ ನಿಖರ ಮಾಹಿತಿ ಪಡೆದುಕೊಳ್ಳುವುದು ಸಾಧ್ಯವಾಗಲಿದೆ. ಜೊತೆಗೆ ಸರಿಯಾದ ರೀತಿಯಲ್ಲಿ ತೆರಿಗೆ ಸಂಗ್ರಹಕ್ಕೂ ಇದು ಪೂರಕವಾಗಲಿದೆ ಎಂದು ತಿಳಿಸಿದ್ದಾರೆ. 2021 ಮಾರ್ಚ್ ಅಂತ್ಯದ ವೇಳೆಗೆ ಈ ಯೋಜನೆಯ ಮೂಲಕ 1950 ಹಳ್ಳಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದೂ ಅವರು ಹೇಳಿದ್ದಾರೆ. ಜೊತೆಗೆ ಆಸ್ತಿ ವ್ಯಾಜ್ಯಗಳೂ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.