ನವದೆಹಲಿ: ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, ಮುಕ್ತ ಮಾರುಕಟ್ಟೆ ಸಾಲ(ಒಎಂಬಿ) ಮೂಲಕ ಐದು ರಾಜ್ಯಗಳಿಗೆ 9,913 ಕೋಟಿ ರೂ. ಹೆಚ್ಚುವರಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಅನುಮತಿ ನೀಡಿದೆ. ಆ ರಾಜ್ಯಗಳೆಂದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಮತ್ತು ತ್ರಿಪುರಾ. ಈ ರಾಜ್ಯಗಳು ಅತ್ಯಂತ ಯಶಸ್ವಿಯಾಗಿ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಅನುಷ್ಠಾನಕ್ಕೆ ಒಡ್ಡಿದ್ದ ಸುಧಾರಣಾ ಷರತ್ತು ಪಾಲನೆಯಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಅನುಮತಿ ನೀಡಲಾಗಿದೆ.
ಆಂಧ್ರಪ್ರದೇಶಕ್ಕೆ 2,525 ಕೋಟಿ ರೂ., ತೆಲಂಗಾಣಕ್ಕೆ 2,508 ಕೋಟಿ ರೂ., ಕರ್ನಾಟಕಕ್ಕೆ 4,509 ಕೋಟಿ ರೂ., ಗೋವಾಕ್ಕೆ 223 ಕೋಟಿ ರೂ., ತ್ರಿಪುರಾಗೆ 148 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಅನುಮತಿಸಲಾಗಿದೆ.
ಅನಿರೀಕ್ಷಿತ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ಮೇ ತಿಂಗಳಿನಲ್ಲಿ ರಾಜ್ಯಗಳ ಒಟ್ಟು ದೇಶೀಯ ಉತ್ಪನ್ನ(ಜಿಎಸ್ ಡಿಪಿ)ಯ ಶೇ. 2ರಷ್ಟು ಮಿತಿಯೊಂದಿಗೆ 2020-21ನೇ ಸಾಲಿಗೆ ಹೆಚ್ಚುವರಿ ಸಾಲಗಳನ್ನು ಪಡೆದುಕೊಳ್ಳಲು ರಾಜ್ಯಗಳಿಗೆ ಅನುಮತಿ ನೀಡಿತ್ತು. ಇದರಿಂದಾಗಿ ರಾಜ್ಯಗಳಿಗೆ 4,27,302 ಕೋಟಿ ರೂ. ಲಭ್ಯವಾಗಿತ್ತು. ಇದರಲ್ಲಿ ಶೇಕಡ ಒಂದರಷ್ಟು ಮೊತ್ತವನ್ನು ಒಂದು ರಾಷ್ಟ್ರ ಒಂದು ಪಡಿತರ ವ್ಯವಸ್ಥೆ ಜಾರಿ, ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ, ನಗರ ಸ್ಥಳೀಯ ಸಂಸ್ಥೆ/ಬಳಕೆ ಸುಧಾರಣೆ ಮತ್ತು ವಿದ್ಯುತ್ ವಲಯದ ಸುಧಾರಣೆಗಳಲ್ಲಿ ವಿಶೇಷ ರಾಜ್ಯಮಟ್ಟದ ಸುಧಾರಣೆಗಳನ್ನು ಕೈಗೊಳ್ಳಲು ಅನುಷ್ಠಾನಕ್ಕೆ ವಿನಿಯೋಗಿಸಬೇಕಾಗಿತ್ತು. ಅದರಲ್ಲಿ ಜಿ ಎಸ್ ಡಿಪಿಯ ಶೇ.0.25ರಷ್ಟು ಪ್ರತಿಯೊಂದಕ್ಕೂ ನಿಗದಿಪಡಿಸಲಾಗಿತ್ತು.
ಉಳಿದ ಶೇಕಡ ಒಂದರಷ್ಟು ಹೆಚ್ಚುವರಿ ಸಾಲವನ್ನು ಶೇಕಡ 0.50 ಅಂತೆ ಎರಡು ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಮೊದಲ ಕಂತಿನಲ್ಲಿ ಎಲ್ಲ ರಾಜ್ಯಗಳಿಗೆ ತಕ್ಷಣವೇ ಬಿಡುಗಡೆ ಮಾಡಲಾಗಿತ್ತು ಮತ್ತು ಎರಡನೇ ಕಂತನ್ನು ಈ ಮೇಲೆ ಉಲ್ಲೇಖಿಸಿದ ಸುಧಾರಣೆಗಳ ಪೈಕಿ ಕನಿಷ್ಠ ಮೂರು ಅಂಶಗಳನ್ನು ಪಾಲಿಸಿರುವ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುವುದು. ಭಾರತ ಸರ್ಕಾರ ಈಗಾಗಲೇ 2020ರ ಜೂನ್ ನಲ್ಲಿ ಒಎಂಬಿ ಮೂಲಕ ಮೊದಲ ಕಂತಿನ ಶೇಕಡ 0.50ರಷ್ಟು ಹಣವನ್ನು ಪಡೆದುಕೊಳ್ಳಲು ರಾಜ್ಯಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ರಾಜ್ಯಗಳಿಗೆ ಹೆಚ್ಚುವರಿಯಾಗಿ 1,06,830 ಕೋಟಿ ರೂ.ಗಳು ಲಭ್ಯವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.