ನವದೆಹಲಿ: ಡಾ. ವಿಕ್ರಮ್ ಸಾರಾಭಾಯ್ ಅವರು ವಿಶ್ವದರ್ಜೆಯ ವಿಜ್ಞಾನಿ, ನೀತಿ ನಿರೂಪಕ ಮತ್ತು ಸಾಂಸ್ಥಿಕ ನಿರ್ಮಾತೃ ಆಗಿದ್ದರು, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ನೇತೃತ್ವ ವಹಿಸಲು ಅವರು ಚಾಣಾಕ್ಷ ವಿಜ್ಞಾನಿಗಳ, ಮಾನವಶಾಸ್ತ್ರಜ್ಞರ, ಸಂವಹನಕಾರರ ಮತ್ತು ಸಮಾಜ ವಿಜ್ಞಾನಿಗಳ ಸೈನ್ಯವನ್ನು ಸಂಯೋಜಿಸಿದ್ದರು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ಡಾ. ವಿಕ್ರಮ್ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಕೋವಿಂದ್ ಅವರು, ಡಾ. ಸಾರಾಭಾಯ್ ಅವರಿಗೆ ಗೌರವ ಸಲ್ಲಿಸಿದರು ಮತ್ತು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು. ಡಾ. ಸಾರಾಭಾಯ್ ಮತ್ತು ಡಾ. ಭಾಭಾ ಇಬ್ಬರಿಗೂ ವಿಜ್ಞಾನವು ಸ್ವತಃ ಒಂದು ರೋಮಾಂಚಕಾರಿ ಪ್ರಯಾಣ ಮಾತ್ರವಲ್ಲ, ಭಾರತದಂತಹ ದೇಶಕ್ಕೆ ಆಧುನಿಕ ಅಭಿವೃದ್ಧಿಯ ಹಾದಿಯಾಗಿದೆ ಎಂದು ಅವರು ಹೇಳಿದರು.
ಡಾ. ಸಾರಾಭಾಯ್ ಅವರ ದೃಷ್ಟಿಯನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, “ಡಾ. ಸಾರಾಭಾಯ್ ಅವರು ರಾಷ್ಟ್ರೀಯ ಅಭಿವೃದ್ಧಿಗೆ ಉಪಗ್ರಹ ವ್ಯವಸ್ಥೆಯ ಉಪಯುಕ್ತತೆಯನ್ನು ಪ್ರದರ್ಶಿಸಲು ಬಯಸಿದ್ದರು. ಕೋವಿಡ್ -19 ಸಾಂಕ್ರಾಮಿಕವು ಶಾಲಾ ಶಿಕ್ಷಣವನ್ನು ಅಡ್ಡಿಪಡಿಸಿರುವ ಈ ಸಂದರ್ಭದಲ್ಲಿ ದೂರ ಶಿಕ್ಷಣ ಅನಿವಾರ್ಯವಾಗಿದ್ದು, ಇಂದು ಅವರ ಕನಸಿನ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಅತ್ಯಂತ ವಿನಮ್ರ ಮತ್ತು ಮಹತ್ವಾಕಾಂಕ್ಷೆಯ ಆರಂಭವನ್ನು ಕಂಡ ಭಾರತವು ಇಂದು ಮಾನವ ಬಾಹ್ಯಾಕಾಶ ಹಾರಾಟವನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ನಡೆಸುವ ಹಂತವನ್ನು ತಲುಪಿದೆ ಎಂದು ಕೋವಿಂದ್ ಹೇಳಿದರು. ಭಾರತದ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಮಿಷನ್ ಗಗನಯಾನ ನಡೆಸುವ ಗುರಿಯು ಡಾ. ಸಾರಾಭಾಯ್ ಅವರ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.