ನವದೆಹಲಿ: ಕೋವಿಡ್-19 ಕೇವಲ ಆರೋಗ್ಯ ತುರ್ತುಪರಿಸ್ಥಿತಿ ಮಾತ್ರವಲ್ಲ, ತಪ್ಪು ಮಾಹಿತಿಯ ತುರ್ತುಪರಿಸ್ಥಿತಿಯೂ ಆಗಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಹೇಳಿದ್ದಾರೆ. ಬುಧವಾರ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ನಡೆದ ಇನ್ಫೋಡಮಿಕ್ ಮ್ಯಾನೇಜ್ಮೆಂಟ್ ಕಾರ್ಯಕ್ರಮದಲ್ಲಿ ಅವರು ಈ ಸಂದೇಶವನ್ನು ನೀಡಿದರು.
“ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗದ ಪಸರಿಸುವಿಕೆ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು, ಅಪಾಯಕಾರಿ ಮಾಹಿತಿಗಳು ಹರಿದಾಡುವುದು ಹೆಚ್ಚಾಗಿದೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ, ತಪ್ಪುದಾರಿಗೆ ಹೋಗುತ್ತಿದ್ದಾರೆ ಮತ್ತು ತಪ್ಪು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದಿದ್ದಾರೆ.
“ರೋಗನಿರೋಧಕದ ಬಗೆಗಿನ ಸುಳ್ಳುಗಳು ಹೆಚ್ಚಾಗುತ್ತಿದೆ. ಹೀಗಾಗಿ ವೈಜ್ಞಾನಿಕ ಆಧಾರಿತ ಸತ್ಯಗಳನ್ನು ಮತ್ತು ಆರೋಗ್ಯ ನಿರ್ದೇಶನಗಳನ್ನು ಕ್ಷಿಪ್ರ ವೇಗದಲ್ಲಿ ಹಂಚಿಕೆಯಾಗುವಂತೆ ಮತ್ತು ಜನರನ್ನು ತಲುಪುವಂತೆ ನಾವು ಮಾಡಬೇಕಿದೆ” ಎಂದಿದ್ದಾರೆ.
“ಭವಿಷ್ಯದ ಕೋವಿಡ್-19 ಲಸಿಕೆಯ ಸುರಕ್ಷತೆ ಮತ್ತು ದಕ್ಷತೆಯ ಬಗ್ಗೆ ಸಾರ್ವಜನಿಕ ವಿಶ್ವಾಸವನ್ನು ನಿರ್ಮಾಣ ಮಾಡುವತ್ತ ನಾವು ನಿರ್ಣಾಯಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ತಪ್ಪು ಮಾಹಿತಿಗಳು ಅಡೆತಡೆಯಾಗಿದೆ” ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮಾಧ್ಯಮ ಪಾಲುದಾರರು, ವ್ಯಕ್ತಿಗಳು, ಪ್ರಭಾವ ಬೀರುವವರು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಜೊತೆಗೂಡಿ ಕಾರ್ಯನಿರ್ವಹಿಸುವ ಮೂಲಕ ತಪ್ಪು ಮಾಹಿತಿಯ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ.
“ಕೇವಲ ಉತ್ತಮ ಮಾಹಿತಿಯುಳ್ಳ ಸಾರ್ವಜನಿಕರ ಬೆಂಬಲದೊಂದಿಗೆ ಮಾತ್ರ ನಾವು ಸಾಂಕ್ರಾಮಿಕದ ವಿರುದ್ಧ ಹೋರಾಡಬಹುದು, ಸಾಂಕ್ರಾಮಿಕದಿಂದ ಸುರಕ್ಷಿತರಾಗಬಹುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.