ಬೆಂಗಳೂರು: ನಗರದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಶಂಕಿತ ಉಗ್ರ ಶೋಯಬ್ನನ್ನು 12 ವರ್ಷಗಳ ಬಳಿಕ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಈತ 2008 ರಿಂದಲೇ ತಲೆಮರೆಸಿಕೊಂಡಿದ್ದ. ಇದೀಗ ಈತನನ್ನು ಎಟಿಎಸ್ ಪೊಲೀಸರು ಕೇರಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಕೇರಳ ರಾಜ್ಯದ ಕಲ್ಲಿಕೋಟೆಯ ನಿವಾಸಿಯಾಗಿದ್ದು, ಸಿಮಿ ಉಗ್ರ ಸಂಘಟನೆಯಲ್ಲಿಯೂ ಈತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸಿದ ಬಳಿಕ ಈತ ನಾಪತ್ತೆಯಾಗಿದ್ದ. ಸದ್ಯ ಈತನನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.
ಈತ ಉಗ್ರಗಾಮಿ ರಿಯಾಝ್ ಭಟ್ಕಳನ ಆಪ್ತ ವಲಯದಲ್ಲಿಯೂ ಗುರುತಿಸಿಕೊಂಡಿದ್ದ. ದೇಶದೊಳಗೆ ನಡೆದ ಅನೇಕ ಉಗ್ರ ಕೃತ್ಯಗಳಿಗೆ ಸ್ಪೋಟಕ ವಸ್ತುಗಳನ್ನು ಸರಬರಾಜು ಮಾಡುವಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು. ಈ ಉಗ್ರನ ಬಂಧನಕ್ಕೆ ತನಿಖಾ ಸಂಸ್ಥೆಗಳು ರೆಡ್ ಕಾರ್ನರ್ ನೊಟೀಸ್ ಅನ್ನು ಸಹ ಹೊರಡಿಸಿದ್ದವು.
ಸದ್ಯ ಪೊಲೀಸರು ಈತನನ್ನು ವಿಚಾರಣೆ ನಡೆಸುತ್ತಿದ್ದು, ದೆಹಲಿಯ ಹವಾಲಾ ಪ್ರಕರಣದಲ್ಲಿಯೂ ಈತ ಭಾಗಿಯಾಗಿರುವ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ. 2008 ರಲ್ಲಿ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿಯೂ ಈತ ಭಾಗವಹಿಸಿರುವ ಶಂಕೆ ಇದೆ. ಈತ ಬೆಂಗಳೂರು ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯಾಗಿದ್ದು, ಈತನೊಂದಿಗೆ ಮತ್ತೊಬ್ಬ ಉಗ್ರನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರಿಬ್ಬರೂ ಲಷ್ಕರ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರು ಎಂಬ ಶಂಕೆ ಇದ್ದು, ಸೌದಿ ಅರೇಬಿಯಾದಿಂದ ತಿರುವನಂತಪುರಕ್ಕೆ ಬರುವ ಸಂದರ್ಭದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.