ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸೆ.24ರಂದು ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಫಿಟ್ನೆಸ್ ಪ್ರಭಾವಿಗಳೊಡನೆ ಹಾಗೂ ನಾಗರೀಕರೊಡನೆ ಆನ್ಲೈನ್ ಸಂವಾದವನ್ನು ಏರ್ಪಡಿಸಲಾಗಿದೆ.
ಈ ಸಂವಾದದಲ್ಲಿ ಪಾಲ್ಗೊಳ್ಳುವ ಪ್ರಮುಖ ಫಿಟ್ನೆಸ್ ಪ್ರಭಾವಿ ವ್ಯಕ್ತಿಗಳು ತಮ್ಮ ಫಿಟ್ನೆಸ್ ಬದುಕನ್ನು ವ್ಯಾಖ್ಯಾನಿಸಲಿದ್ದಾರೆ. ಹಾಗೂ ಕೆಲವು ಸಲಹೆಗಳನ್ನೂ ಹಂಚಿಕೊಳ್ಳಲಿದ್ದಾರೆ. ಸದೃಢ ಮತ್ತು ಸ್ವಾಸ್ಥ್ಯಮಯ ಬದುಕಿಗಾಗಿ ಮೋದಿ ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲಿದ್ದಾರೆ. ಈ ಸಂವಾದದಲ್ಲಿ ವಿರಾಟ್ ಕೊಹ್ಲಿ, ಮಿಲಿಂದ್ ಸೋಮನ್, ರುಜುತಾ ದಿವೇಕರ್ ಮುಂತಾದವರೂ ಪಾಲ್ಗೊಳ್ಳಲಿದ್ದಾರೆ.
ಕೋವಿಡ್- 19 ಸಮಯದಲ್ಲಿ ಸದೃಢರಾಗುವುದು ಜೀವನದ ಅತ್ಯಗತ್ಯ ಅಂಶವಾಗಿ ಮಾರ್ಪಟ್ಟಿದೆ. ಈ ಸಂದರ್ಭದಲ್ಲಿ ಫಿಟ್ ಇಂಡಿಯಾ ಚಳವಳಿಯು ತನ್ನ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ಪೌಷ್ಠಿಕಾಂಶ, ಸ್ವಾಸ್ಥ್ಯ, ಸದೃಢತೆಗಾಗಿ ಅಗತ್ಯವಿರುವ ಇನ್ನಿತರ ಆಯಾಮಗಳನ್ನೂ ಈ ಸಂವಾದದಲ್ಲಿ ಚರ್ಚಿಸಲಾಗುತ್ತದೆ.
ಮೋದಿಯವರ ದೂರದೃಷ್ಟಿತ್ವದ ಈ ಚಳವಳಿಯು ಜನರನ್ನು ತನ್ನತ್ತ ಸೆಳೆಯುತ್ತಿದೆ. ಈಗ ಇನ್ನೊಂದು ಹಂತಕ್ಕೆ ಮುನ್ನಡೆಯುವ ಕಾಲ ಸನ್ನಿಹಿತವಾಗಿದೆ. ಸದೃಢ, ಸ್ವಾಸ್ಥ್ಯಮಯ ರಾಷ್ಟ್ರಕ್ಕಾಗಿ ನಾಗರಿಕರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ.
ಫಿಟ್ ಇಂಡಿಯಾ ಚಳವಳಿಯ ಮೂಲ ಉದ್ದೇಶವೆಂದರೆ ಭಾರತೀಯರೆಲ್ಲರೂ ದುಬಾರಿಯಲ್ಲದ, ಸರಳ ಮತ್ತು ಸಹಜವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸದೃಢರನ್ನಾಗಿಸುವುದು ಮತ್ತು ಈ ಮೂಲಕ ವರ್ತನೆಯಲ್ಲಿನ, ನಡಾವಳಿಯಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುವುದೂ ಆಗಿದೆ. ಕಸರತ್ತು, ವ್ಯಾಯಾಮದೊಂದಿಗೆ ಸದೃಢ ದೇಹ, ಸುವಿಚಾರದ ಮನಸನ್ನು ಗಟ್ಟಿಗೊಳಿಸಲೆಂದೇ ಈ ಚಳವಳಿಯನ್ನು ಆರಂಭಿಸಲಾಗಿತ್ತು. ಇದು ಎಲ್ಲ ಭಾರತೀಯರ ಜೀವನದ ಒಂದು ಭಾಗವಾಗಲಿ ಎಂಬುದು ಈ ಅಭಿಯಾನದ ಆಶಯವಾಗಿತ್ತು.
ಈ ಅಭಿಯಾನ ಆರಂಭವಾದಾಗಿನಿಂದಲೂ ಹಲವಾರು ಚಟುವಟಿಕೆಗಳನ್ನು ಫಿಟ್ ಇಂಡಿಯಾ ಚಳವಳಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ದೇಶದ ವಿವಿಧ ಸ್ತರದ, ವಯೋಮಾನದ ಎಲ್ಲ ನಾಗರಿಕರೂ ಉತ್ಸಾಹದಿಂದ ಪಾಲ್ಗೊಂಡು ಈ ಅಭಿಯಾನವನ್ನು ಬೆಂಬಲಿಸಿದರು. ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ, ಸೈಕಲಾಥಾನ್, ಫ್ಲ್ಯಾಗ್ ರನ್ನಂತಹ ಹಲವಾರು ಕ್ರೀಡೆಗಳಲ್ಲಿ ಭಾರತದ 3.5 ಕೋಟಿ ಜನರು ಪಾಲ್ಗೊಂಡು ಇದನ್ನು ಜನರ ಅಭಿಯಾನವಾಗಿ ರೂಪುಗೊಳಿಸುವಲ್ಲಿ ಕೈಜೋಡಿಸಿದರು.
ಈಗ ಈ ಫಿಟ್ ಇಂಡಿಯಾ ಸಂವಾದವು, ಎಲ್ಲ ಫಿಟ್ನೆಸ್ ಮಂತ್ರ ಹೇಳುವ ಪ್ರಭಾವಿ ಜನರೊಂದಿಗಿನ ಸಂವಾದವು ಈ ಚಳವಳಿಯ ಮೂಲ ಆಶಯದೆಡೆಗೆ ಎಲ್ಲರನ್ನೂ ಗಮನ ಸೆಳೆಯುವಂತೆ ಮಾಡುತ್ತದೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು, ರಾಷ್ಟ್ರದಾದ್ಯಂತ ಚಳವಳಿಯು ರೂಪುಗೊಳ್ಳುವಂತೆ ಮಾಡುತ್ತದೆ.
ಸೆ.24ರ ಬೆಳಗಿನ 11.30ಯಿಂದ ಈ ಲಿಂಕ್ ಬಳಸಿ https://pmindiawebcast.nic.in ಈ ಸಂವಾದದಲ್ಲಿ ಯಾರಾದರೂ ಪಾಲ್ಗೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.