ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಹಲವೆಡೆ ವರುಣನ ರುದ್ರ ನರ್ತನಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರ ಜೋರಾಗಿದ್ದರಿಂದ ಉಡುಪಿಯ ಬಹುತೇಕ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಮನೆ ಮಠಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಭಾರೀ ಪ್ರಮಾಣದ ಮಳೆಯಿಂದಾಗಿ ಮನೆಯೊಳಕ್ಕೆ ಮಳೆ ನೀರು ನುಗ್ಗಿ ಸಂಕಷ್ಟಕ್ಕೀಡಾಗಿದ್ದ ಉಡುಪಿಯ ನೇಕಾರ ದಂಪತಿಯ ಬದುಕು ಮುಳುಗುವಂತಾಗಿದೆ. ಜೀವನೋಪಾಯದ ಆಧಾರವಾಗಿದ್ದ ಕೈಮಗ್ಗ ಯಂತ್ರವೂ ಮಳೆಯ ಅವಾಂತರದಿಂದ ಜಲಾಹುತಿಯಾಗಿದೆ. ಇದು 72 ವರ್ಷದ ಲಕ್ಷ್ಮಣ ಶೆಟ್ಟಿಗಾರ್ ಕುಟುಂಬದ ಕಣ್ಣೀರ ಕಥೆಯಾಗಿದ್ದು, ಇವರು ಯಕ್ಷಗಾನಕ್ಕೆ ಸಂಬಂಧಿಸಿದಂತಹ ಉಡುಗೆಯನ್ನು ನೇಯುವ ಕೆಲಸ ಮಾಡುತ್ತಿದ್ದರು. ಈ ಮಹಾ ಮಳೆ ಅವರ ಬದುಕನ್ನೇ ಕಸಿದುಕೊಳ್ಳುವಂತೆ ಮಾಡಿದೆ. ಈ ಸಂಬಂಧ ಪತ್ರಕರ್ತರೊಬ್ಬರು ಈ ವೃದ್ಧ ದಂಪತಿಗಳಿಗೆ ನೆರವಾಗುವಂತೆ ಮನವಿ ಮಾಡಿದ್ದರು.
ಈ ಮನವಿಗೆ ಅನೇಕರು ಸ್ಪಂದಿಸಿದ್ದು, ಈ ಬಡ ದಂಪತಿಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಇವರ ಖಾತೆಗೆ ಅನೇಕ ಮಂದಿ ಸಹೃದಯಿಗಳು ಧನ ಸಹಾಯವನ್ನೂ ಜಮೆ ಮಾಡಿದ್ದಾರೆ. ಹ್ಯಾಂಡ್ಲೂಮ್ ಮತ್ತು ಟೈಕ್ಸ್ಟೈಲ್ಸ್ ಡಿಪಾರ್ಟ್ಮೆಂಟ್ನ ಎಡಿ ಶಿವಶಂಕರ್ ಅವರೂ ಇವರಿಗೆ ತಕ್ಷಣದ ಪರಿಹಾರವನ್ನು ನೀಡುವ ಮೂಲಕ ನೆರವು ನೀಡಿದ್ದು, ಈ ನೇಕಾರ ದಂಪತಿ ಮತ್ತೆ ಬದುಕು ಕಟ್ಟಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮಳೆಹಾನಿಯಿಂದಾಗಿ ಅದೆಷ್ಟೋ ಮಂದಿ ಮನೆ, ಮಠ ಕಳೆದುಕೊಂಡಿರುವ ಸಾಧ್ಯತೆ ಇದ್ದು, ಈ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. 38 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಉಡುಪಿ ಮಹಾಮಳೆಯ ತೀವ್ರತೆಗೆ ತುತ್ತಾಗಿದ್ದು, ಸರ್ಕಾರದ ವತಿಯಿಂದ, ಸ್ಥಳೀಯರೂ ಸೇರಿದಂತೆ ನೆರೆಗೆ ಸಿಕ್ಕವರ ರಕ್ಷಣಾ ಕಾರ್ಯವನ್ನು ನಡೆಸಲಾಗುತ್ತಿದೆ.
— Ashwini M Sripad (@AshwiniMS_TNIE) September 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.