ಛತ್ತೀಸ್ಗಢ: ಛತ್ತೀಸ್ಗಢದ ಕೊರಿಯಾ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕ ರುದ್ರ ರಾಣಾ ಎಂಬವರು ಕೊರೋನಾ ಸಾಂಕ್ರಾಮಿಕ ಅವಧಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಮೊಹಲ್ಲಾ ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ಬೈಕ್ಗೆ ಕರಿ ಹಲಗೆ ಅಳವಡಿಸಿಕೊಂಡು ಬೈಕ್ ಮೂಲಕವೇ ಒಂದೂರಿನಿಂದ ಇನ್ನೊಂದೂರಿಗೆ ಪ್ರಯಾಣಿಸಿ ಪ್ರತಿನಿತ್ಯ ಅಲ್ಲಿರುವ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಪಾಠ ಮಾಡುತ್ತಿದ್ದಾರೆ.
ಕೊರೋನಾ ಲಾಕ್ಡೌನ್ನಿಂದಾಗಿ ಅಲ್ಲಿನ ಸರ್ಕಾರ ಆನ್ಲೈನ್ ತರಗತಿಗಳಿಗೆ ಅವಕಾಶ ನೀಡಿದ್ದರೂ, ಎಲ್ಲಾ ಮಕ್ಕಳಿಗೂ ಈ ರೀತಿಯ ಶಿಕ್ಷಣದಲ್ಲಿ ಭಾಗವಹಿಸಲು ಅಸಾಧ್ಯವಾಗಿತ್ತು. ಇದನ್ನು ಮನಗಂಡ ರಾಣಾ ಅವರು ತಮ್ಮ ಬೈಕ್ಗೆ ಕರಿಹಲಗೆ ಸಿಕ್ಕಿಸಿ, ಮೇಲೊಂದು ಕೊಡೆ (ಛತ್ರಿ) ಯನ್ನು ಅಳವಡಿಸಿ, ಶಾಲಾ ಪುಸ್ತಕಗಳನ್ನು ತೆಗೆದುಕೊಂಡು ಮಕ್ಕಳ ಬಳಿಗೆ ತೆರಳಿ ಪಾಠ ಹೇಳಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಇವರು ತಮ್ಮ ಬೈಕ್ಗೆ ಅಳವಡಿಸಿರುವ ದೊಡ್ಡ ಗಾತ್ರದ ಕೊಡೆ ಇವರಿಗೆ ಮಳೆ, ಬಿಸಿಲುಗಳಿಂದ ರಕ್ಷಣೆ ನೀಡುತ್ತದೆ ಎಂದು ಅವರೇ ನುಡಿಯುತ್ತಾರೆ.
ಪ್ರತಿನಿತ್ಯ ಊರಿಂದೂರಿಗೆ ತೆರಳಿ ಪಾಠ ಮಾಡುವ ಇವರು ಈ ಬಗ್ಗೆ ಮಾತನಾಡಿದ್ದು, ಊರಿಗೆ ಹೋಗಿ ಬೈಕ್ನ ಬೆಲ್ ಬಾರಿಸಿದ ತಕ್ಷಣ ಮಕ್ಕಳು ಬಂದು ಪಾಠ ಕೇಳುತ್ತಾರೆ. ಜೊತೆಗೆ ಈ ರೀತಿಯ ಕ್ರಮ ಮಕ್ಕಳಿಗೆ ಶಾಲೆಯ ಪರಿಸರದಂತೆಯೇ ಇದ್ದು, ಕಲಿಕೆಗೆ ಹೆಚ್ಚು ಪೂರಕವಾಗಿದೆ ಎಂದು ಹೇಳುತ್ತಾರೆ. ಕೊರೋನಾ ಸಂದರ್ಭದಲ್ಲಿ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿಯೂ ಅವರು ತಿಳಿಸಿದ್ದಾರೆ. ಈ ಪಾಠದ ಸಂದರ್ಭದಲ್ಲಿ ಎಲ್ಲಾ ರೀತಿಯ ಕೊರೋನಾ ನಿಯಂತ್ರಣ ನಿಯಮಗಳನ್ನು ಅನುಸರಿಸುವುದಾಗಿಯೂ ಅವರು ಹೇಳಿದ್ದಾರೆ.
ಇನ್ನು ಇವರ ಈ ಕಾರ್ಯದ ಬಗ್ಗೆ ವಿದ್ಯಾರ್ಥಿಗಳೂ ಹರ್ಷ ವ್ಯಕ್ತಪಡಿಸಿದ್ದು, ಇವರ ಈ ಕ್ರಮದಿಂದ ಶಾಲಾ ಪಠ್ಯಗಳ ಜೊತೆಗೆ ಕೊರೋನಾ ಬರದಂತೆ ಹೇಗೆ ಕಾಪಾಡಿಕೊಳ್ಳುವುದು ಎಂಬ ವಿಚಾರದ ಬಗೆಗೂ ಮಾಹಿತಿ ಸಿಗುತ್ತದೆ. ಇವರು ನೀಡುತ್ತಿರುವ ಶಿಕ್ಷಣದ ಕ್ರಮ ಶಾಲಾ ಶಿಕ್ಷಣದಂತೆಯೇ ಇದೆ ಎಂದು ಮಕ್ಕಳು ತಿಳಿಸಿದ್ದಾರೆ. ಆನ್ಲೈನ್ ಶಿಕ್ಷಣ ವಂಚಿತರಾದವರಿಗೂ ಈ ರೀತಿಯಲ್ಲಿ ಶಿಕ್ಷಣ ನೀಡಲು ಮುಂದಾಗಿರುವ ತಮ್ಮ ಗುರುಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.