ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಭಾರತ ಮತ್ತು ಚೀನಾ ನಡುವಣ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿದರು.
ಸದ್ಯದ ಪರಿಸ್ಥಿತಿಗೆ ಚೀನಾವೇ ಕಾರಣ ಎಂದು ಆರೋಪಿಸಿದ ಅವರು, ಕೇಂದ್ರಾಡಳಿತ ಪ್ರದೇಶ ಲಡಾಖ್ನ ಸುಮಾರು 38,000 ಚದರ ಕಿ.ಮೀ.ಈಗಲೂ ಚೀನಾದ ಅಕ್ರಮ ವಶದಲ್ಲಿ ಮುಂದುವರೆದಿದೆ, ಚೀನಾ ಕ್ರಮಗಳು ನಮ್ಮ ವಿವಿಧ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
“ಚೀನಾ ತನ್ನ ಸೈನ್ಯವನ್ನು ನಿಯೋಜಿಸುವುದು 1993 ಮತ್ತು 1996 ರ ಒಪ್ಪಂದಗಳಿಗೆ ವಿರುದ್ಧವಾಗಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಗಡಿ ನಿಯಂತ್ರಣ ರೇಖೆಯನ್ನು ಗೌರವಿಸುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.
“ಈ ಸಂಘರ್ಷಗಳ ಉದ್ದಕ್ಕೂ ನಮ್ಮ ಸಶಸ್ತ್ರ ಪಡೆಗಳ ನಡವಳಿಕೆಯು ಶ್ಲಾಘನೀಯವಾದುದು, ಪ್ರಚೋದನಕಾರಿ ಕೃತ್ಯಗಳ ನಡುವೆಯೂ ಅವರು ಸಂಯಮವನ್ನು ಕಾಪಾಡಿಕೊಂಡರು. ಭಾರತದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಅಗತ್ಯವಿದ್ದಾಗ ಅವರು ಶೌರ್ಯವನ್ನು ಕೂಡ ತೋರಿಸಿದ್ದಾರೆ” ಎಂದಿದ್ದಾರೆ.
“ಜೂನ್ 15 ರಂದು, ಕರ್ನಲ್ ಸಂತೋಷ್ ಬಾಬು ಮತ್ತು 19 ಕೆಚ್ಚೆದೆಯ ಸೈನಿಕರು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಗಾಲ್ವಾನ್ ಕಣಿವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದರು. ಪಡೆಗಳ ಸ್ಥೈರ್ಯವನ್ನು ಹೆಚ್ಚಿಸಲು ನಮ್ಮ ಪ್ರಧಾನಿ ಸ್ವತಃ ಲಡಾಖ್ಗೆ ಹೋದರು ”ಎಂದು ಸಿಂಗ್ ಮೇಲ್ಮನೆಯಲ್ಲಿ ಹೇಳಿದ್ದಾರೆ.
ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಬಹುದು ಮತ್ತು ಎಲ್ಎಸಿ ಕುರಿತು ಚರ್ಚೆ ನಡೆದು ಶಾಂತಿ ನೆಲೆಸಬಹುದು ಎಂದು ಭಾರತ ಭಾವಿಸುತ್ತಿದೆ, ಆದರೆ ಎಲ್ಎಸಿಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಯಾವುದೇ ಪ್ರಯತ್ನವನ್ನು ಭಾರತ ಹಿಮ್ಮೆಟ್ಟಿಸಲಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.