ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಗೋಳ ಗ್ರಾಮದ ಬಡ ಕುಟುಂಬದಿಂದ ಬಂದ 8 ನೇ ತರಗತಿಯ ವಿದ್ಯಾರ್ಥಿನಿ ಗ್ರಾಮೀಣ ಪ್ರತಿಭೆ, ಮಹಿಳಾ ಸೈಕ್ಲಿಂಗ್ ಪಟು ಪವಿತ್ರ ಕುರ್ತಕೋಟಿ ಅವರು ನವದೆಹಲಿಯಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಕ್ಯಾಂಪ್ಗೆ ಆಯ್ಕೆಯಾಗಿದ್ದಾರೆ.
ಈಕೆಯ ಪಾಲಕರು ಕೂಲಿ ಕೆಲಸದಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈಕೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ಓದುತ್ತಿದ್ದ ಸಂದರ್ಭದಲ್ಲಿ ಈಕೆಯಲ್ಲಿನ ಪ್ರತಿಭೆಯನ್ನು ಗುರುತಿಸಿದ ಡಿ.ಎ. ಹುಬ್ಬಳ್ಳಿ ಅವರು ಅವಳನ್ನು ಜಿಲ್ಲಾ ಕ್ರೀಡಾ ಶಾಲೆಗೆ ಸೇರಿಸುವ ಕೆಲಸ ಮಾಡುತ್ತಾರೆ. ಆಕೆಗೆ ಶಿಕ್ಷಣ ನೀಡಲು ಆಕೆಯ ಕುಟುಂಬ ಆರ್ಥಿಕವಾಗಿ ಶಕ್ತವಲ್ಲವಾಗಿದ್ದರಿಂದ ಆಕೆಗೆ ಈ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ ಆಕೆಯ ಪ್ರತಿಭೆ ಆಕೆಯನ್ನು ಖೇಲೋ ಇಂಡಿಯಾ ಕ್ಯಾಂಪ್ಗೆ ಆಯ್ಕೆಯಾಗುವಂತೆ ಮಾಡಿದೆ.
ಈಕೆ ತನ್ನ ಪರಿಶ್ರಮದ ಮೂಲಕವೇ ಉತ್ತಮ ಸಾಧನೆಗಳನ್ನು ಮಾಡುತ್ತಾ ಬಂದಿದ್ದಾಳೆ. 14 ಮತ್ತು 16 ನೇ ವರ್ಷದೊಳಗಿನ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬಳಿಕ 2017 ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದರು. ಅವರ ಈ ಸಾಧನೆಯನ್ನು ಗಮನಿಸಿಕೊಂಡೇ ಖೇಲೋ ಇಂಡಿಯಾ ಕ್ಯಾಂಪ್ಗೆ ಪವಿತ್ರ ಅವರನ್ನು ಆಯ್ಕೆಮಾಡಲಾಗಿದೆ.
ಖೇಲೋ ಇಂಡಿಯಾ ಕ್ಯಾಂಪ್ಗೆ ಆಯ್ಕೆಯಾದ ಕ್ರೀಡಾಪಟು ನಿರಂತರವಾಗಿ ಅಲ್ಲಿಯೇ ಇರಬೇಕು. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ತರಬೇತಿದಾರರು, ಪೌಷ್ಟಿಕ ಆಹಾರ ಸೇರಿದಂತೆ ಎಲ್ಲಾ ಅನುಕೂಲಗಳನ್ನು ಒದಗಿಸಲಾಗುತ್ತದೆ. ಇವರು ದೇಶ, ವಿದೇಶಗಳ ಮಟ್ಟದಲ್ಲಿ ತಾವು ಗುರುತಿಸಿಕೊಂಡಿರುವ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇವರಿಗೆ ದಿನಕ್ಕೆ 12 ಗಂಟೆಗೂ ಅಧಿಕ ಸಮಯ ತರಬೇತಿ ನೀಡಲಾಗುತ್ತದೆ. ಸದ್ಯ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಖೇಲೋ ಇಂಡಿಯಾ ಕ್ಯಾಂಪ್ ಇನ್ನೂ ಆರಂಭವಾಗಿಲ್ಲ. ಕ್ರೀಡಾ ಸಚಿವಾಲಯದಿಂದ ಅನುಮತಿ ಪಡೆದು ಅಕ್ಟೋಬರ್ ತಿಂಗಳಿನಿಂದ ಈ ಕ್ಯಾಪ್ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನು ಪವಿತ್ರ ಬಗ್ಗೆ ಹೇಳುವುದಾದರೆ, ಆಕೆ ಈ ಕ್ಯಾಂಪ್ಗೆ ಆಯ್ಕೆಯಾದ ಅತ್ಯಂತ ಕಿರಿಯ ಕ್ರೀಡಾಪಟು. ಹಠವಾದಿ. ಏನೋ ಸಾಧನೆಯ ಕನಸು ಹೊತ್ತು ಅದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಸದ್ಯ ಈಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಹಿಂದೆ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಬೇಕಾದ ಗುಣಮಟ್ಟದ ಸೈಕಲ್ ಅನ್ನು ಹಿಂದಿನ ಜಿಲ್ಲಾಧಿಕಾರಿಗಳು ಕೊಡಿಸುವ ವ್ಯವಸ್ಥೆ ಮಾಡಿದ್ದರು. ಸದ್ಯ ಈಕೆ ಖೇಲೋ ಇಂಡಿಯಾ ಕ್ಯಾಂಪ್ಗೆ ಆಯ್ಕೆಯಾಗಿದ್ದು, ಆಕೆಯ ಕೀರ್ತಿ ದೇಶ ವಿದೇಶಗಳಲ್ಲಿ ರಾರಾಜಿಸುವಂತಾಗಲಿ ಎಂಬ ಆಶಯ ಎಲ್ಲರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.