ಧಾರವಾಡ: 2010 ರಿಂದ ಸಮಯ ತೋರಿಸುವ ಕೆಲಸವನ್ನು ನಿಲ್ಲಿಸಿದ್ದ ಕರ್ನಾಟಕ ಕಲಾ ವಿದ್ಯಾಲಯದ 130 ವರ್ಷಗಳ ಹಿಂದಿನ ಪಾರಂಪರಿಕ ಗೋಪುರ ಗಡಿಯಾರವನ್ನು ರೈಲ್ವೆ ಸಿಬ್ಬಂದಿಗಳು ದುರಸ್ತಿ ಮಾಡಿದ್ದಾರೆ. ಸದ್ಯ ಈ ಗಡಿಯಾರ ದಶಕಗಳ ಬಳಿಕ ಇದೀಗ ಮತ್ತೆ ಕಾರ್ಯ ನಿರ್ವಹಿಸಲು ಪ್ರಾರಂಭ ಮಾಡಿದೆ.
ಮಹಾವಿದ್ಯಾಲಯ ಈ ಗಡಿಯಾರವನ್ನು ದುರಸ್ತಿಗೆ ಈ ಹಿಂದೆ ಸಾಕಷ್ಟು ಪ್ರಯತ್ನ ನಡೆಸಿತ್ತು. ಆ ಬಳಿಕ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಕಛೇರಿಗೆ ಪತ್ರ ಬರೆದು ಈ ಐತಿಹಾಸಿಕ ಗಡಿಯಾರವನ್ನು ದುರಸ್ತಿ ಮಾಡಿ ಸರಿಪಡಿಸಲು ಸಹಾಯ ಮಾಡುವಂತೆಯೂ ಮನವಿ ಮಾಡಿತ್ತು. ಈ ವಿಚಾರವನ್ನು ಸವಾಲಿನಂತೆ ಪರಿಗಣಿಸಿದ ರೈಲ್ವೆ ಸಿಬ್ಬಂದಿ ಸುಮಾರು ಒಂದು ತಿಂಗಳ ಕಾಲ ಪ್ರಯತ್ನ ನಡೆಸಿ, ಇದೀಗ ಮತ್ತೆ ಗಡಿಯಾರ ಸದ್ದು ಮಾಡುವಂತೆ ಮಾಡಿದ್ದಾರೆ.
ಈ ಗಡಿಯಾರವನ್ನು ರಿಪೇರಿ ಮಾಡುವ ನಿಟ್ಟಿನಲ್ಲಿ ಎಚ್ಎಂಟಿ ಸಂಸ್ಥೆಯೂ ಪ್ರಯತ್ನ ನಡೆಸಿತ್ತು. ಆದರೆ ಈ ಯಾವುದೇ ಪ್ರಯತ್ನಗಳು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿತ್ತು. ಇದೀಗ ರೈಲ್ವೆ ಸಿಬ್ಬಂದಿಯ ನಿರಂತರ ಪ್ರಯತ್ನದ ಫಲವಾಗಿ ಗಡಿಯಾರ ದಶಕಗಳ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದೆ. ರೈಲ್ವೆಯ ವರ್ಕ್ಶಾಪ್ನ ಮುಖ್ಯ ಕಾರ್ಯವ್ಯವಸ್ಥಾಪಕ ನೀರಜ್ ಜೈನ್ ಮತ್ತು ಸಿಬ್ಬಂದಿಗಳು ಈ ಗಡಿಯಾರವನ್ನು ಮತ್ತೆ ನಡೆಯುವಂತೆ ಮಾಡಿದ್ದಾರೆ. ಗಡಿಯಾರ ಕೆಲಸ ಮಾಡುತ್ತಿರುವುದಾಗಿ ಕಳೆದ ಶುಕ್ರವಾರ ಅಧಿಕೃತವಾಗಿ ಘೋಷಣೆಯನ್ನು ಮಾಡಲಾಗಿದೆ.
ಪ್ರಸ್ತುತ ಕರ್ನಾಟಕ ಕಲಾ ಮಹಾವಿದ್ಯಾಲಯದ ಕಟ್ಟಡ 1890 ಸದರ್ನ್ ಮಹ್ರತ್ ರೈಲ್ವೆಯ ಕೇಂದ್ರ ಕಛೇರಿಯಾಗಿತ್ತು. 1920 ರಲ್ಲಿ ಈ ಕಟ್ಟಡವನ್ನು ಬಾಂಬೆ ಪ್ರೆಸಿಡೆನ್ಸಿ 3,26,956 ರೂ. ಗಳಿಗೆ ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ ಖರೀದಿ ಮಾಡಿತ್ತು. ಈ ಕಟ್ಟಡದ 130 ವರ್ಷಗಳ ಹಿಂದಿನ ಈ ಗೋಪುರ ಗಡಿಯಾರ ವಿಶಿಷ್ಟ ರೀತಿಯದ್ದಾಗಿದ್ದು, ಕೊಠಡಿಯಲ್ಲಿ ಗೇರ್ಬಾಕ್ಸ್ ಸೇರಿದಂತೆ ಇನ್ನಿತರ ಬಿಡಿ ಭಾಗಗಳಿವೆ.
ಈ ಗಡಿಯಾರವನ್ನು ಲಂಡನ್ನಿನ ವಾಚ್ ತಯಾರಿಕ ತಂತ್ರಜ್ಞ ಪೀಟರ್ ಓರ್ ಅವರಿಂದ ಭಾರತಕ್ಕೆ ತರಿಸಲಾಗಿತ್ತು. ಈ ಗಡಿಯಾರ ಈಗ ಮತ್ತೆ ಸಮಯ ತೋರಿಸುವಂತಾಗಿದ್ದು, ಆ ಮೂಲಕ ಐತಿಹಾಸಿಕ ಕಟ್ಟಡಕ್ಕೆ ಮತ್ತಷ್ಟು ಕಳೆ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.