ಬೆಂಗಳೂರು: ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿರುವ ಬೆನ್ನಲ್ಲೇ, ಬೆಂಗಳೂರು ಪೊಲೀಸರು ಸುರಂಗದೊಳಗೆ ಅಡಗಿಸಿದ್ದ ಸುಮಾರು 1 ಟನ್ಗೂ ಅಧಿಕ ಗಾಂಜಾವನ್ನು ಪತ್ತೆ ಹಚ್ಚಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸಾ ಪತ್ರ ಮತ್ತು 2 ಲಕ್ಷ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಂಧನಕ್ಕೊಳಗಾದ ಕುಖ್ಯಾತ ಆರೋಪಿಗಳ ಬಗೆಗೂ ಮಾಹಿತಿ ನೀಡಿರುವ ಅವರು, ಗಾಯತ್ರಿ ನಗರದ ನಿವಾಸಿ ಅಟೋ ಚಾಲಕನಾಗಿರುವ ಜ್ಞಾನಶೇಖರ್, ವಿಜಯಪುರದ ಸಿಂಧಗಿಯ ಸಿದ್ದುನಾಥ ಲಾವಟಿ, ಬೀದರ್ ಜಿಲ್ಲೆಯ ಔರಾದ್ನ ನಾಗಾನಾಥ್ ಮತ್ತು ಕಲ್ಬುರ್ಗಿಯ ಕಾಳಗಿ ತಾಲೂಕಿನ ಚಂದ್ರಕಾಂತ್ ಈ ದಂಧೆ ನಡೆಸುತ್ತಿದ್ದುದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಸುಮಾರು ಒಂದು ವಾರಕ್ಕೂ ಅಧಿಕ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 6 ಕೋಟಿ ರೂ. ಗಳ ಗಾಂಜಾ ಸಾರ್ವಜನಿಕರಿಗೆ ದೊರೆಯುವುದನ್ನು ಪೊಲೀಸರು ತಪ್ಪಿಸಿರುವುದಾಗಿ ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ತಲುಪಿಸುವ ಕೆಲಸವನ್ನು ಜ್ಞಾನಶೇಖರ್ ಮಾಡುತ್ತಿದ್ದ. ಹತ್ತನೇ ತರಗತಿ ಓದಿರುವ ಸಿದ್ದುನಾಥ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ಬೆಂಗಳೂರು, ಮುಂಬೈಗಳಿಗೆ ತಲುಪಿಸುತ್ತಿದ್ದ, ನಾಗನಾಥ್ ಹತ್ತನೇ ತರಗತಿ ಕಲಿತಿದ್ದು ಫೈನಾನ್ಸ್ ಮತ್ತು ಬಟ್ಟೆ ಅಂಗಡಿ ಹೊಂದಿದ್ದ. ಲಾಕ್ಡೌನ್ ಸಂದರ್ಭದಲ್ಲಿ ಈ ದಂಧೆಗೆ ಇಳಿದಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಚಂದ್ರಕಾಂತ್ ಏಳನೇ ತರಗತಿ ಕಲಿತಿದ್ದು ವ್ಯವಸಾಯ, ಕುರಿ ಸಾಕಾಣಿಕೆ ಮಾಡುತ್ತಿದ್ದ. ಒಡಿಶಾ ಮತ್ತು ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ಕಳೆದ 4-5 ವರ್ಷಗಳಿಂದ ದಂಧೆ ನಡೆಸುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.