ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕೆ ಪೂರಕವಾಗುವಂತೆ ರಾಜ್ಯದ ಪ್ರತಿಭೆಯ ಪ್ರದರ್ಶನಕ್ಕೆ ಸಾಕ್ಷಿಯಾಗುವ 22 ಉತ್ಪನ್ನಗಳನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಲೋಕಾರ್ಪಣೆ ಮಾಡಿದರು.
ರಾಜ್ಯದ ಐಟಿ/ಬಿಟಿ ಇಲಾಖೆಯ ಕರ್ನಾಟಕ ಅವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ (KITS) ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೊವೇಷನ್ ಸೆಂಟರ್ (ಬಿಬಿಸಿ- ಬೆಂಗಳೂರು ಜೈವಿಕ ಆವಿಷ್ಕಾರ ಕೇಂದ್ರ)ನ ಮೇಲ್ವಿಚಾರಣೆಯಲ್ಲಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, KITS ನ ಕರ್ನಾಟಕ ನವೋದ್ಯಮ ಕೋಶದ (ಕರ್ನಾಟಕ ಸ್ಟಾರ್ಟ್ ಅಪ್ ಸೆಲ್) ಮೇಲ್ವಿಚಾರಣೆಯಡಿ 16 ಉತ್ಪನ್ನಗಳು ಅಭಿವೃದ್ಧಿಗೊಂಡಿರುವುದಾಗಿಯೂ ಮೂಲಗಳು ತಿಳಿಸಿವೆ.
ಈ ಸಂಬಂಧ ಮಾತನಾಡಿರುವ ಇಲಾಖೆಯ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಸಿ ಚೇರ್ಮನ್ ಡಾ. ಇ.ವಿ. ರಮಣ ರೆಡ್ಡಿ, ಮುಂದಿನ ದಿನಗಳಲ್ಲಿ ಈ ಸಂಶೋಧನೆಗಳನ್ನು ನಡೆಸಿದವರನ್ನು ಸೂಕ್ತ ವ್ಯಾಪಾರ ಪಾಲುದಾರರ ಜೊತೆಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುವುದಾಗಿಯೂ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಂಬೈನ ಐಐಟಿ-ಎಸ್ಐಎನ್ಇ ಮತ್ತು ಬಿಬಿಸಿ ನಡುವೆ ಒಪ್ಪಂದವೊಂದಕ್ಕೂ ಸಹಿ ಹಾಕಲಾಯಿತು. ಈ ಒಪ್ಪಂದ ಹಣಕಾಸು ಸಂಪನ್ಮೂಲ ಕ್ರೋಢೀಕರಣ, ತಾಂತ್ರಿಕ ನೆರವಿನ ಮೂಲಕ ಬಿಬಿಸಿಯ ನವೋದ್ಯಮಗಳಿಗೆ ಸಹಕಾರಿಯಾಗಲಿದೆ ಎಂದು IIT-SINE ನ ಪ್ರೊ. ಸಂತೋಷ್ ಘರ್ಪುರೆ ತಿಳಿಸಿದ್ದಾರೆ.
ಕರ್ನಾಟಕ ನವೋದ್ಯಮ ಕೋಶ ಕೊರೋನಾ ಸಂದರ್ಭದಲ್ಲಿ ‘ಕೋವಿಡ್-19 ಚಾಲೆಂಜ್’ ಅಡಿಯಲ್ಲಿ ಹೊಸ ಅನ್ವೇಷಣೆಕಾರರಿಂದ ಅರ್ಜಿ ಆಹ್ವಾನ ಮಾಡಿತ್ತು. 3 ಹಂತಗಳಿಗೆ ಸಂಬಂಧಿಸಿದಂತೆ 356 ಅರ್ಜಿಗಳು ಈ ಚಾಲೆಂಜ್ನ ಅಡಿಯಲ್ಲಿ ಬಂದಿದ್ದವು. ಉದ್ಯಮ ಸಂಘಟನೆಗಳು ನಿರ್ದೇಶನ ಮಾಡಿದ ಸ್ವತಂತ್ರ ಜ್ಯೂರಿಯು ಕ್ರಮಬದ್ಧ ಮೌಲ್ಯಮಾಪನ ನಡೆಸಿದೆ. ವಿನೂತನತೆ, ಸಂಶೋಧನೆಯ ಕಾಲಮಿತಿ, ತಯಾರಿಕಾ ಸಾಮರ್ಥ್ಯ, ತಂಡದ ಶಕ್ತಿ, ಪ್ರಮಾಣಪತ್ರ & ಅನುಪಾಲನೆಗಳು ಇತ್ಯಾದಿಗಳನ್ನು ಆಧರಿಸಿ ಈ 16 ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.