ನವದೆಹಲಿ: ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಅತ್ಯುತ್ತಮ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿಗೆ ದೇಶದ 47 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಇಂದು ಅವರಿಗೆ ಪುರಸ್ಕಾರ ವರ್ಚುವಲ್ ಆಗಿ ಪ್ರದಾನಿಸಲಾಗಿದೆ. ಕರ್ನಾಟಕದ ಮೂವರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಕೇಂದ್ರ ಶಿಕ್ಷಣ ಸಚಿವಾಲಯ ಪುರಸ್ಕರಿಸಿದೆ.
ಈ ಬಾರಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಡಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಎಸ್. ಯಾಕೂಬ್ ಮತ್ತು ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕು ಬಂದರವಾಡದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್ ಮತ್ತು ಬೆಂಗಳೂರು ಜಾಲಹಳ್ಳಿ ಎ.ಎಫ್.ಎಸ್. (ಪೂರ್ವ)ದ ಕೇಂದ್ರೀಯ ವಿದ್ಯಾಲಯದ ಮುಖ್ಯ ಶಿಕ್ಷಕಿ ಚೆಮ್ಮಲಾರ್ ಶಣ್ಮುಗಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಳ್ತಂಗಡಿ ತಾಲೂಕು ನಾಡಾ ಸರ್ಕಾರಿ ಶಾಲೆಯ ಯಾಕೂಬ್ ನಾವಿನ್ಯಪೂರ್ಣವಾಗಿ ಗಣಿತ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಅವರು ಮೊಬೈಲ್ ಅಪ್ಲಿಕೇಶನ್ ಮತ್ತು ತಂತ್ರಾಂಶ ಬಳಸಿಕೊಂಡು ಗಣಿತವನ್ನು ಬೋಧಿಸುತ್ತಿದ್ದಾರೆ. ಜೊತೆಗೆ ತಾವೇ 50ಕ್ಕೂ ಹೆಚ್ಚು ಮಾದರಿಗಳನ್ನು ರೂಪಿಸಿದ್ದು, ಈ ಮೂಲಕ ಮಕ್ಕಳಿಗೆ ಕಷ್ಟಕರವಾದ ಲೆಕ್ಕಗಳನ್ನು ಸುಲಭವಾಗಿ ಮಾಡುವುದನ್ನು ಕಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ವಯಂ ಲೆಕ್ಕ ಅಭ್ಯಾಸ ಮಾಡಲು ಮತ್ತು ಕಲಿಯಲು ಉತ್ತೇಜಿಸುತ್ತಿದ್ದಾರೆ. ಹಲವು ಪುಸ್ತಕಗಳನ್ನೂ ಅವರು ಬರೆದಿದ್ದಾರೆ.
ಬಂದರವಾಡ ಸರ್ಕಾರಿ ಶಾಲೆಯ ಸುರೇಖಾ ಜಗನ್ನಾಥ್ ಅವರು, ವಿಜ್ಞಾನ ಶಿಕ್ಷಕಿಯಾಗಿದ್ದು, ತಮ್ಮ ಶಾಲೆಯಲ್ಲಿ ಹಲವು ನಾವಿನ್ಯಪೂರ್ಣ ಬೋಧನಾಕ್ರಮಗಳನ್ನು ಅಳವಡಿಸಿದ್ದಾರೆ. ವಿಜ್ಞಾನ ಬೋಧನೆಗೆ ಪೂರಕವಾಗಿ ಅವರು 100ಕ್ಕೂ ಹೆಚ್ಚು ನಾವಿನ್ಯಪೂರ್ಣ ಮಾದರಿಗಳು, ಪ್ರಯೋಗ ಪರಿಕರ ರೂಪಿಸಿದ್ದು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡಿಸುತ್ತಿದ್ದಾರೆ. ಅವರು ಪ್ರಯೋಗಗಳ ಕುರಿತಂತೆ ಹಲವು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಈ ಇಬ್ಬರು ಶಿಕ್ಷಕರೂ ರಾಜ್ಯಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಶಣ್ಮುಗಮ್ ಅವರು, ಕೇಂದ್ರೀಯ ವಿದ್ಯಾಲಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾಗಿದ್ದು, ತಮ್ಮನ್ನು ಅತ್ಯಂತ ಸಮಗ್ರ ಮತ್ತು ಬಹುಮುಖಿ ಶಿಕ್ಷಕಿ ಎಂದು ನಿರೂಪಿಸಿದ್ದಾರೆ. ಇಂಗ್ಲಿಷ್ ಕಲಿಕೆಗೆ ಹೊಸ ಆಯಾಮ ನೀಡಿರುವ ಅವರು ಅದಕ್ಕಾಗಿ ತರಗತಿಯಲ್ಲಿನ ಆಟಿಕೆಗಳು ಮತ್ತು ಸಂಗೀತಮಯ ಕಾಗುಣಿತ, ನರ್ತನದ ಪದಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ವಿಧಾನಗಳನ್ನು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಚಿಕ್ಕ ಮಕ್ಕಳಿಗೆ ಹೊಸ ಭಾಷೆಯನ್ನು ಸುಲಭವಾಗಿ ಕಲಿಯಲು ನೆರವಾಗಿದೆ. ಜೊತೆಗೆ ಶಾಲಾ ಮಕ್ಕಳಿಗೆ ಬೆಂಗಳೂರಿನಲ್ಲಿ ನಾಶವಾಗಿರುವ ಕೆರೆಗಳು ಇತ್ಯಾದಿ ಸಾಮಾಜಿಕ ವಿಚಾರಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.