ಬೆಂಗಳೂರು: ರಾಜ್ಯದ ನೂತನ ಕೈಗಾರಿಕಾ ನೀತಿ 2020-25 ರ ಅನ್ವಯ ದೇಶದ ಟ್ರಿಲಿಯನ್ ಡಾಲರ್ ಆರ್ಥಿಕ ಪ್ರಗತಿಯ ಗುರಿಯ 30% ವನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಉದ್ಯಮದಿಂದ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕ ಕ್ರಮಕ್ಕೆ ಮುಂದಾಗಿದೆ.
ಮುಂದಿನ ಐದು ವರ್ಷಗಳಿಗೆ ಸಂಬಂಧಿಸಿದಂತೆ ನೇರ ಮತ್ತು ಪರೋಕ್ಷವಾಗಿ 60 ಲಕ್ಷ ಉದ್ಯೋಗಾವಕಾಶವನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆಯ ಮೂಲಕ ಹೊಂದಲಾಗಿದೆ. ಇದಕ್ಕಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಹೊರಗಿನ ವಲಯಗಳಲ್ಲಿ ಪೂರಕ ಮೂಲಸೌಕರ್ಯಗಳನ್ನು ಒದಗಿಸಿ ಕೊಡುವ ಸಲುವಾಗಿಯೂ ರಾಜ್ಯ ಸರ್ಕಾರ ರೂಪು ರೇಶೆಗಳನ್ನು ಹಾಕಿಕೊಳ್ಳುತ್ತಿದೆ.
ಕೊರೋನಾ ಸಂಕಷ್ಟದ ಅವಧಿಯಲ್ಲಿ ಚೀನಾ ತೊರೆದ ಕೈಗಾರಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿಯೂ ರಾಜ್ಯ ಸರ್ಕಾರದ ಸಚಿವ ಸಂಪುಟ ವಿದ್ಯುನ್ಮಾನ ವಿನ್ಯಾಸ ವ್ಯವಸ್ಥೆ ಮತ್ತು ತಯಾರಿಕ ವಲಯದಲ್ಲಿ ವಿಶೇಷ ರಿಯಾಯಿತಿ ನೀಡುವ ಯೋಜನೆಯೊಂದಕ್ಕೆ ಅನುಮೋದನೆ ನೀಡಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ವಿಚಾರದಲ್ಲಿ ಹಾಕಿಕೊಂಡಿದ್ದ ಗುರಿ ತಲುಪಲಾಗಿದೆ. ಸದ್ಯ ಬೇರೆ ನಗರಗಳಿಗೆ ಸಂಬಂಧಿಸಿದಂತೆ ಎರಡು ಮತ್ತು ಮೂರನೇ ಹಂತದ ಯೋಜನೆಗೂ ಗಮನ ನೀಡಲಾಗಿದೆ. 60 ಲಕ್ಷ ಉದ್ಯೋಗದ ಗುರಿ ಸಾಧನೆ ಮಾಡುವುದಾಗಿಯೂ ಸರ್ಕಾರ ಮಾಹಿತಿ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಐಟಿ ಬಿಟಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಸಿ. ಎನ್., ಈ ನೂತನ ನೀತಿಯಡಿಯಲ್ಲಿ ಬೆಂಗಳೂರು ಹೊರವಲಯದಲ್ಲಿ ವಲಯ-3ರಲ್ಲಿ ಐಟಿ ಹಬ್ ಮತ್ತು ಕ್ಲಸ್ಟರ್ ನಿರ್ಮಾಣ ಮಾಡಲು 3 ಕೋಟಿ ರೂ. ಮತ್ತು ಜಾಗ, ಮೂಲಸೌಕರ್ಯಗಳಿಗಾಗಿ 2 ಕೋಟಿ ರೂ. ಗಳನ್ನು ನೀಡಲಾಗುವುದು. ಐಟಿ ಉದ್ಯಮವನ್ನು 2025 ರ ಒಳಗಾಗಿ 300 ಬಿಲಿಯನ್ ಡಾಲರ್ಗೆ ಹೆಚ್ಚಿಸಲಾಗುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸ್ಟ್ಯಾಂಪ್ ಮತ್ತು ವಿದ್ಯುತ್ ಬಿಲ್ ರಿಯಾಯಿತಿ ಹೊರತುಪಡಿಸಿ ನೇರ 102 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ. ಇಎಸ್ಡಿಎಂ ವಲಯದಲ್ಲಿ 2 ಕೋಟಿ ರೂ. ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಮಂಗಳೂರು, ಹುಬ್ಬಳ್ಳಿ, ಧಾರಾವಾಡ, ಮೈಸೂರುಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸ್ಟ್ಯಾಂಪ್ ಕರ್ತವ್ಯದಲ್ಲಿ 75% ವಿನಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರ ವಲಯದಲ್ಲಿ ಸ್ಟ್ಯಾಂಪ್ ಕರ್ತವ್ಯ ವಿನಾಯಿತಿ ನೀಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.