ಬೆಂಗಳೂರು: ಸಮಾಜದ ಅಲ್ಲಲ್ಲಿ ನಡೆಯುವ ಮಾದರಿ ಸಂಗತಿಗಳನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪ್ರಕಟಿಸುವ ಕೆಲಸವನ್ನು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡುವುದು ಅಪರೂಪವೇನಲ್ಲ. ಇಂದೂ ಸಹ ಅಂತಹ ಒಂದು ಪ್ರೇರಣೆಯಾಗುವ ಘಟನೆಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡಮ್ಮನವರ್ ಅವರ ಮಾದರಿ ಕೆಲಸ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಈ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾಗಿಯೂ ಸಚಿವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಅವರು ಬೆಳ್ಳಂಬೆಳಗ್ಗೆ ನಾಗರಬಾವಿ ವಿನಾಯಕ ನಗರದ 9 ನೇ ಬ್ಲಾಕ್ನ ಸ್ಲಂನಲ್ಲಿ ವಾಸಿಸುವ ಬಡ ಮಕ್ಕಳಿಗೆ ಗಣಿತ ಮತ್ತು ಸಾಮಾನ್ಯ ಜ್ಞಾನದ ಪಾಠಗಳನ್ನು ಹೇಳಿಕೊಡುತ್ತಿರುವ ಚಿತ್ರಗಳನ್ನು ಅವರು ಪ್ರಕಟಿಸಿದ್ದು, ಈ ಘಟನೆ ತಮ್ಮ ಮನ ಮುಟ್ಟಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಇವರ ಈ ಕಾರ್ಯ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಕೆಲಸದ ಬಗ್ಗೆ ಶಾಂತಪ್ಪ ಅವರನ್ನು ಮಾತನಾಡಿಸಿರುವ ಸಚಿವರು, ಅವರಿಂದ ದೊರೆತ ಉತ್ತರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಶಾಂತಪ್ಪ ಅವರು ಬಳ್ಳಾರಿಯ ವಲಸೆ ಕಾರ್ಮಿಕ ಕುಟುಂಬದಿಂದ ಬಂದವರು, ನನಗೆ ಬಡ ವಿದ್ಯಾರ್ಥಿಗಳ ಸಮಸ್ಯೆ ತಿಳಿದಿದೆ. ಆದ್ದರಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಈ ಕೆಲಸ ಮಾಡುತ್ತೇನೆ. ಪ್ರತಿನಿತ್ಯ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಈ ಕಾರ್ಯ ಮುಗಿಸಿ ತೆರಳುವುದಾಗಿಯೂ ಅವರು ತಿಳಿಸಿದ್ದಾಗಿ ಸಚಿವರು ಬರೆದುಕೊಂಡಿದ್ದಾರೆ.
ಹಾಗೆಯೇ ಅಲ್ಲಿನ ಸ್ಲಂ ನಿವಾಸಿಗಳಲ್ಲಿ ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕು ಮಾಡದಂತೆ ಮತ್ತು ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಮಾಡದಂತೆ ಪ್ರಮಾಣ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಸಮಾಜ ಸೇವೆಯ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನೆರವಾಗುತ್ತಿರುವ ಮತ್ತು ತಮ್ಮ ಮಾದರಿ ಕೆಲಸದ ಮೂಲಕ ಪೊಲೀಸ್ ಇಲಾಖೆಗೂ ಹೆಸರು ತಂದಿರುವ ಎಸ್ಐ ಶಾಂತಪ್ಪ ಅವರಿಗೂ ಧನ್ಯವಾದ ಸಮರ್ಪಿಸಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಬೆಳಗ್ಗೆಯೇ ನನಗೆ ಆಶ್ಚರ್ಯ ಮತ್ತು ಸ್ಫೂರ್ತಿ ತಂದ ಘಟನೆ ಯನ್ನು ತಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.ಬೆಳಿಗ್ಗೆ ಏಳಕ್ಕೇ …
Posted by Suresh Kumar S on Wednesday, September 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.