ಬೆಂಗಳೂರು: ಕೇಂದ್ರ ಸರ್ಕಾರ ಅನ್ಲಾಕ್ 4 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವೂ 4 ನೇ ಹಂತದ ಅನ್ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸೆ.7 ರಿಂದ ತೊಡಗಿದಂತೆ ಎಲ್ಲಾ ರೀತಿಯ ಕೊರೋನಾ ನಿಯಂತ್ರಣ ನಿಯಮಗಳನ್ನು ಅನುಸರಿಸಿ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಈ ಸಂಬಂಧ ಬಿಎಂಆರ್ಸಿಎಲ್ ಸಹ ಮೆಟ್ರೋ ಸಂಚಾರ ಆರಂಭಿಸಲು ಪೂರ್ವ ಸಿದ್ಧತೆ ಮಾಡಿಕೊಂಡಿದೆ. ನೇರಳೆ ಬಣ್ಣದ ಲೈನ್ನಲ್ಲಿ ಮೆಟ್ರೋ ಸೇವೆ ಸೆ. 7 ರಿಂದ ಆರಂಭವಾಗಲಿದೆ. ಜನ ಸಂಚಾರ ಹೆಚ್ಚಾಗಿರುವ ಬೆಳಗ್ಗಿನ ಅವಧಿಯಲ್ಲಿ 3 ಗಂಟೆ (8-11) ಮತ್ತು ಸಂಜೆ ವೇಳೆಯಲ್ಲಿ 3 ಗಂಟೆ(4.30-7-30), ಒಟ್ಟು 6 ಗಂಟೆಗಳ ಕಾಲ 5 ನಿಮಿಷಕ್ಕೊಮ್ಮೆ ಮೆಟ್ರೋ ಓಡಿಸಲು ನಿರ್ಧರಿಸಿದೆ. ಈ ಸಂಬಂಧ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಿದೆ. ಹಸಿರು ಬಣ್ಣದ ವಲಯದಲ್ಲಿ ಸೆ. 9 ರಿಂದ ಮೆಟ್ರೋ ಆರಂಭವಾಗಲಿದ್ದು 10ರ ವರೆಗೆ, ಬೆಳಗ್ಗೆ 3(8-11), ಸಂಜೆ 3 (4.30;7-30) ಗಂಟೆಗಳ ಕಾಲ 5 ನಿಮಿಷಕ್ಕೊಮ್ಮೆ ಕಾರ್ಯಾಚರಿಸಲಿದೆ. ಸೆ. 11 ರಿಂದ ತೊಡಗಿದಂತೆ ಬೆಳಗ್ಗೆ 7 ರಿಂದ ತೊಡಗಿ ರಾತ್ರಿ 9 ರ ವರೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ.
ಮೆಟ್ರೋ ಓಡಾಟದ ಸಂದರ್ಭದಲ್ಲಿ ನಿಲ್ದಾಣಗಳಲ್ಲಿ ಜನರು 2 ಮೀ. ಅಂತರ ಪಾಲಿಸಬೇಕು. ಫ್ಲ್ಯಾಟ್ಫಾರ್ಮ್ನಲ್ಲಿ ಹಳದಿ ಗುರುತಿನ ಮೇಲೆಯೇ ನಿಲ್ಲಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಿಲ್ದಾಣ ಮತ್ತು ರೈಲುಗಳಲ್ಲಿ ಗುರುತು ಮಾಡಬೇಕು. ಮಾಸ್ಕ್ ಕಡ್ಡಾಯ. ಮಾಸ್ಕ್ ಹಾಕದವರಿಗೆ ಪಾವತಿಯ ಆಧಾರದಲ್ಲಿ ಮಾಸ್ಕ್ ಒದಗಿಸುವ ವ್ಯವಸ್ಥೆ ಮೆಟ್ರೋ ಮಾಡಬೇಕು. ನಿಲ್ದಾಣಕ್ಕೆ ಆಗಮಿಸುವಾಗ ದೇಹದ ಉಷ್ಣತೆ ಪರೀಕ್ಷೆ ನಡೆಯಲಿದೆ. ಕೊರೋನಾ ಲಕ್ಷಣಗಳಿದ್ದರೆ ಸಮೀಪದ ಕೊರೋನಾ ಕೇರ್ ಸೆಂಟರ್ಗೆ ತೆರಳಿ ಪರೀಕ್ಷೆ ನಡೆಸಲು ಸೂಚನೆ. ಆರೋಗ್ಯವಂತ ಪ್ರಯಾಣಿಕರಿಗಷ್ಟೇ ಮೆಟ್ರೋ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ, 50 ಮಂದಿಗಷ್ಟೇ ನಿಲ್ದಾಣಗಳಲ್ಲಿ ನಿಲ್ಲಲು ಅವಕಾಶ ನೀಡಲಾಗಿರುವುದಾಗಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
400 ಮಂದಿಗೆ ಪ್ರಯಾಣಕ್ಕೆ ಅವಕಾಶ, ಸಂಚಾರ ದಟ್ಟಣೆ ಇದ್ದಲ್ಲಿ ಆ ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇಲ್ಲ. ಅಲ್ಲದೆ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬೇಕಿದೆ. ನಿಲ್ದಾಣದಲ್ಲಿ ಸ್ಯಾನಿಟೈಸರ್ ಒದಗಿಸಬೇಕು. ನೈರ್ಮಲೀಕರಣ ಕಾಪಾಡುವುದು ಕಡ್ಡಾಯ. ಸ್ಮಾರ್ಟ್ ಕಾರ್ಡ್, ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬೋರ್ಡಿಂಗ್, ಡಿಬೋರ್ಡಿಂಗ್ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜನೆ, ಪ್ರಯಾಣಿಕರು ಕನಿಷ್ಠ ವಸ್ತುಗಳ ಜೊತೆಗೆ ಪ್ರಯಾಣ ನಡೆಸಲು ಸೂಚನೆ, ತ್ವರಿತ ಸ್ಕ್ಯಾನಿಂಗ್ಗಾಗಿ ಲೋಹದ ವಸ್ತುಗಳನ್ನು ಒಯ್ಯುವುದನ್ನು ಕಡಿಮೆ ಮಾಡಲು ಪ್ರಯಾಣಿಕರಿಗೆ ಸೂಚನೆ ಸೇರಿದಂತೆ ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮೆಟ್ರೋ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ.
ದೇಶದ ಎಲ್ಲಾ ರಾಜ್ಯಗಳಿಗೂ ಸಂಬಂಧಿಸಿದಂತೆ ಮೆಟ್ರೋ ಓಡಾಟಕ್ಕೆ ಕೇಂದ್ರ ಸರ್ಕಾರವೂ ಮಾರ್ಗಸೂಚಿ ಹೊರಡಿಸಿದ್ದು, ಈ ಮಾರ್ಗಸೂಚಿಗೆ ಅನುಗುಣವಾಗಿಯೇ ರಾಜ್ಯ ಸರ್ಕಾರವೂ ತನ್ನ ಪ್ರಕಟಣೆಯನ್ನು ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.