ನವದೆಹಲಿ: ಕೇಂದ್ರ ಸಚಿವ ಸಂಪುಟವು ನಾಗರಿಕ ಸೇವಾ ವಲಯದಲ್ಲಿ ಕಾರ್ಯ ನಿರ್ವಹಿಸುವವರನ್ನು ಗಮನದಲ್ಲಿಟ್ಟುಕೊಂಡು, ಅವರಲ್ಲಿ ಕೌಶಲಾಭಿವೃದ್ಧಿ ಹೆಚ್ಚುವುದಕ್ಕೆ ಪೂರಕವಾದ ಕಾರ್ಯಕ್ರಮ ಮಿಷನ್ ಕರ್ಮಯೋಗಿಗೆ ಇಂದು ಅನುಮೋದನೆ ನೀಡಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಈ ಕಾರ್ಯಕ್ರಮ ಕೇಂದ್ರ ಸರ್ಕಾರದ ಅತಿ ದೊಡ್ಡ ಮಾನವ ಸಂಪನ್ಮೂಲ ಅಭಿವೃದ್ಧಿ ಸುಧಾರಣಾ ಕಾರ್ಯಕ್ರಮವಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯ ಎಚ್.ಆರ್. ಕೌನ್ಸಿಲ್ನಲ್ಲಿ ಪ್ರಧಾನಿ, ಆಯ್ಕೆ ಮಾಡಲಾದ ಕೇಂದ್ರ ಸಚಿವರು, ಮುಖ್ಯಮಂತ್ರಿಗಳನ್ನೊಳಗೊಂಡ ಮಂಡಳಿ ಇದ್ದು, ಅವರ ಕೆಳಗಿನ ಸ್ಥಾನದಲ್ಲಿ ಪ್ರಮುಖ ಶಿಕ್ಷಣ ತಜ್ಞರು, ಜಾಗತಿಕ ನಾಯಕರು ಮತ್ತು ನಾಗರಿಕ ಸೇವಾ ವಲಯದ ವ್ಯಕ್ತಿಗಳನ್ನೊಳಗೊಂಡ ನಾಯಕತ್ವ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ನ ಸೆಕ್ರೆಟರಿ ಸಿ. ಚಂದ್ರಮೌಳಿ, ಮಿಷನ್ ಕರ್ಮಯೋಗಿ ಕಾರ್ಯಕ್ರಮ ನಾಗರಿಕ ಸೇವಾವಲಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಯಾವ ರೀತಿಯಲ್ಲಿ ಇರಬೇಕು, ಅವರ ಕಾರ್ಯ ವೈಖರಿ ಹೇಗಿರಬೇಕು ಎಂಬ ಸರ್ಕಾರದ ದೃಷ್ಟಿಕೋನವನ್ನು ಆಧರಿಸಿದೆ ಎಂಬುದಾಗಿ ತಿಳಿಸಿದ್ದಾರೆ. ಬಂದೊದಗುವ ಜಾಗತಿಕ ಮಟ್ಟದ ಸವಾಲುಗಳ ನಿರ್ವಹಣೆ, ಕಾಲ್ಪನಿಕ-ನವೀನ, ಪೂರ್ವಭಾವಿ-ಸಭ್ಯ, ಪ್ರಗತಿಪರ-ವೃತ್ತಿಪರ, ಎನರ್ಜಿಟಿಕ್-ಎನೇಬ್ಲಿಂಗ್, ಪಾರದರ್ಶಕ-ತಂತ್ರಜ್ಞಾನ ಆಧಾರಿತ, ರಚನಾತ್ಮಕ, ಸೃಜನಶೀಲವಾಗಿ ಕಾರ್ಯ ನಿರ್ವಹಿಸುವ ಚಾಕಚಕ್ಯತೆ ನಾಗರಿಕ ಸೇವಾ ವಲಯದ ಸಿಬ್ಬಂದಿಗಳು ಅಳವಡಿಸಿಕೊಳ್ಳುವುದನ್ನು ಈ ಕಾರ್ಯಕ್ರಮ ತಿಳಿಸುತ್ತದೆ ಎಂದು ನುಡಿದಿದ್ದಾರೆ. ಇದು ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಮಿಷನ್ ಕರ್ಮಯೋಗಿ ಕಾರ್ಯಕ್ರಮವು ನಾಗರಿಕ ಸೇವಾ ವಲಯದ ಅಧಿಕಾರಿಗಳಿಂದ ಹಿಡಿದು ಕಾರ್ಯದರ್ಶಿಗಳ ವರೆಗೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಚಂದ್ರಮೌಳಿ ತಿಳಿಸಿದ್ದಾರೆ. ಈ ಮಿಷನ್ನಲ್ಲಿ ಎರಡು ರೀತಿಯ ವ್ಯವಸ್ಥೆ ಇದ್ದು, ಯಾವ ವರ್ಗದ ಕ್ಷೇತ್ರವನ್ನು ಬೇಕಾದರೂ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವವರು ಆಯ್ಕೆ ಮಾಡಬಹುದಾಗಿದೆ. ಅವರಿಗೆ ಪೂರಕವಾದ ತರಬೇತಿ, ಮಾರ್ಗದರ್ಶನವನ್ನು ಇದರ ಮೂಲಕ ನೀಡಲಾಗುತ್ತದೆ. ಆ ಮೂಲಕ ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿ, ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಲು ಪೂರಕವಾಗುವಂತೆ ಮಾಡಲು ಈ ಯೋಜನೆ ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಿಷನ್ ಕರ್ಮಯೋಗಿ ಜೊತೆಗೆ ಕೇಂದ್ರ ಸಚಿವ ಸಂಪುಟ, ಗಣಿಗಾರಿಕೆ ಸಚಿವಾಲಯ ಮತ್ತು ಫಿನ್ಲ್ಯಾಂಡ್, ಜವಳಿ ಸಚಿವಾಲಯ ಮತ್ತು ಜಪಾನ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಡೆನ್ಮಾರ್ಕ್ ನಡುವಿನ ಮೂರು ಒಪ್ಪಂದಗಳಿಗೂ ಅನುಮೋದನೆ ನೀಡಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.