ಮಂಗಳೂರು: ಅಂತರರಾಜ್ಯ ಗಡಿಗಳಲ್ಲಿ ಪ್ರಯಾಣಕ್ಕೆ ಮುಕ್ತ ಅವಕಾಶ ನೀಡದೆ ಜನರ ಬದುಕಿನಲ್ಲಿ ಆಟವಾಡುತ್ತಿರುವ ಕಾಸರಗೋಡು ಜಿಲ್ಲಾಡಳಿತದ ಮತ್ತು ಕೇರಳ ಸರ್ಕಾರಕ್ಕೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ಹೋರಾಟ ಸಮಿತಿ ಮನವಿ ಸಲ್ಲಿಸಿದೆ. ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದೆ.
ಕೊರೋನಾ ಆಂಭವಾದಾಗ ಕೇಂದ್ರ ಸರ್ಕಾರ ಅನೇಕ ನಿಯಂತ್ರಣ ನಿಯಮಗಳನ್ನು ಜಾರಿಗೆ ತಂದಿತ್ತು. ಇದರಲ್ಲಿ ಅಂತರರಾಜ್ಯ ಪ್ರಯಾಣಿಕರಿಗೆ ನಿರ್ಬಂಧವೂ ಒಂದು. ಆದರೆ ಇದೀಗ ಕೇಂದ್ರ ಸರ್ಕಾರ 4 ನೇ ಹಂತದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಅದರಲ್ಲಿ ಈ ನಿರ್ಬಂಧ ತೆಗೆದು ಹಾಕಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಅದೇ ರೀತಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೂ ಸರ್ಕಾರ ಈ ಸಂಬಂಧ ಪತ್ರ ಬರೆದಿದೆ.
ಆದರೆ ಕೇಂದ್ರ ಅಂತರರಾಜ್ಯ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ್ದರೂ ಕೇರಳ ಮಾತ್ರ ಈ ಆದೇಶವನ್ನು ಮೂಲೆಗುಂಪಾಗಿಸಿದೆ. ಕರ್ನಾಟಕ- ಕೇರಳ ಗಡಿಗಳಲ್ಲಿ ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಈ ಸಂಬಂಧ ಕೆಲವು ದಿನಗಳ ಹಿಂದಷ್ಟೇ ಕಾಸರಗೋಡು ಜಿ. ಪಂಚಾಯತ್ ಸದಸ್ಯ, ಬಿಜೆಪಿ ನಾಯಕ ಶ್ರೀಕಾಂತ್ ಅವರು ಕೇರಳ ಹೈಕೋರ್ಟ್ಗೆ ಮುಕ್ತ ಅವಕಾಶ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಲು ಮನವಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಕೋರ್ಟ್ ಸಹ ಅಂತರರಾಜ್ಯ ಸಂಪರ್ಕದ ನಾಲ್ಕು ರಸ್ತೆಗಳಲ್ಲಿ ಪ್ರಯಾಣಕ್ಕೆ ಅವಕಾಶ ಕೊಡಲು ಕೇರಳ ಸರ್ಕಾರ ಮತ್ತು ಕಾಸರಗೋಡು ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಆದರೆ ಇದೀಗ ಕೇಂದ್ರದ ಮತ್ತು ಹೈಕೋರ್ಟ್ನ ಆದೇಶಕ್ಕೆ ಕಾಸರಗೋಡು ಜಿಲ್ಲಾಡಳಿತ ಮತ್ತೊಮ್ಮೆ ಸೊಪ್ಪು ಹಾಕಿದೆ.
ಗಡಿ ಭಾಗಗಳಲ್ಲಿ ತಪಾಸಣೆ ಹೆಚ್ಚಿಸಿದೆ. ಆಂಟಿಜೆನ್ ಪರೀಕ್ಷೆಯ ದಾಖಲೆಗಳನ್ನು ಕೇಳುತ್ತಿದೆ. ಒಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಅಂತರರಾಜ್ಯ ಗಡಿಗಳನ್ನು ಸಂಚಾರಕ್ಕೆ ಮುಕ್ತ ಗೊಳಿಸುವ ಯಾವುದೇ ಲಕ್ಷಣ ಇಲ್ಲವಾಗಿದೆ. ಈ ಕ್ರಮ ಕರ್ನಾಟಕ, ಕೇರಳದಲ್ಲಿ ಶಿಕ್ಷಣ, ಉದ್ಯೋಗ ನಡೆಸುವ ಜನರಿಗೆ ತಲೆನೋವಾಗಿ ಪರಿಣಮಿಸಿದ್ದು, ಭವಿಷ್ಯದ ಚಿಂತೆಯನ್ನು ಎದುರಿಸುವಂತಾಗಿದೆ. ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ನೀಡದಿದ್ದಲ್ಲಿ, ಮುಕ್ತ ಸಂಚಾರಕ್ಕೆ ಅವಕಾಶ ನೀಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಸಮಿತಿ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ವಿಪಿನ್ ದಾಸ್ ನಂಬಿಯಾರ್, ಸದಸ್ಯರಾದ ಗಣೇಶ್ ಭಟ್ ವಾರಣಾಸಿ, ಭಾಸ್ಕರ್ ಕಾಸರಗೋಡು, ಹರಿಪ್ರಸಾದ್ ಕಾನ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.