ಬೆಂಗಳೂರು: ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ, ಚೇತರಿಕೆಯ ಪ್ರಮಾಣ ಹೆಚ್ಚುತ್ತಲಿದೆ. ಕೊರೋನಾದಿಂದಾದ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯಗಳ ಪೈಕಿ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಹೇಳಿದರು.
ಅವರು ಬೆಂಗಳೂರಿನಲ್ಲಿ ಅನಂತ ಕುಮಾರ್ ಪ್ರತಿಷ್ಠಾನ ಏರ್ಪಡಿಸಿದ್ದ ‘ಕೋವಿಡ್ ಕಾಲದಲ್ಲಿ ನಾಯಕತ್ವ ಹಾಗೂ ದೇಶ ಮೊದಲು’ ಎಂಬ ವೆಬಿನಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ಸೋಂಕು ಇಡೀ ವಿಶ್ವವನ್ನೇ ಕಂಗೆಡಿಸಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಅದನ್ನು ಸಮರ್ಥವಾಗಿ ನಿಭಾಯಿಸಿ ಚೇತರಿಸಿಕೊಳ್ಳುತ್ತಿರುವುದು ಸಮಾಧಾನದ ವಿಚಾರ. ಸೋಂಕಿನ ಕುರಿತಂತೆ ರಾಜ್ಯದ ಜನರಲ್ಲಿಯೂ ಹೆಚ್ಚಿನ ಎಚ್ಚರದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. ಕೊರೋನಾ ಲಾಕ್ಡೌನ್ನಿಂದ ಅನ್ಲಾಕ್ ಸ್ಥಿತಿಗೆ ದೇಶ ಬರುತ್ತಿದೆ. ರಾಜ್ಯ ಈ ಸ್ಥಿತಿಯಲ್ಲಿಯೂ ಆತ್ಮ ನಿರ್ಭರ ಭಾರತ ನಿರ್ಮಾಣ ಪರಿಕಲ್ಪನೆ ಇಟ್ಟುಕೊಂಡು ಮುಂದಡಿ ಇಡುತ್ತಿರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.
ಪ್ರಧಾನಿ ಅವರ ಕರೆಗೆ ಅನುಗುಣವಾಗಿ ರಾಜ್ಯ ಆರ್ಥಿಕತೆಯನ್ನು ಆತ್ಮ ನಿರ್ಭರತೆಯ ಜೊತೆಗೆ ಸಶಕ್ತಗೊಳಿಸಲು ಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಮತ್ತೆ ಆರಂಭ ಮಾಡಲಾಗಿದೆ. ತೆರಿಗೆ ಸಂಗ್ರಹ ವಿಚಾರದಲ್ಲಿಯೂ ರಾಜ್ಯ ಉತ್ತಮ ಸಾಧನೆ ಮೆರೆಯುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು. ಕೊರೋನಾ ಸೋಂಕಿನ ಕಾರಣದಿಂದ ಹಿನ್ನಡೆ ಅನುಭವಿಸಿರುವ ಕೈಗಾರಿಕಾ ಕ್ಷೇತ್ರಕ್ಕೂ ಶಕ್ತಿ ತುಂಬುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಕೊರೋನಾ ಸಂಕಷ್ಟದ ಅವಧಿಯ ಆರಂಭದಲ್ಲಿ ಈ ಸಮಸ್ಯೆಯನ್ನು ಎದುರಿಸುವುದು ಹೇಗೆ ಎಂಬ ಆತಂಕ ಇತ್ತು. ಆದರೆ ಅದರ ಪರಿಣಾಮಕಾರಿ ನಿಯಂತ್ರಣಕ್ಕೆ ಬೇಕಾದಂತಹ ವೈದ್ಯಕೀಯ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಸಮರ್ಥವಾದ ಹೆಜ್ಜೆ ಇಡುವ ಮೂಲಕ ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿದೆ. ನಮೋ ನೇತೃತ್ವದಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಜೊತೆಗೆ ರಾಜ್ಯ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಈ ವೆಬಿನಾರ್ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ನವದೆಹಲಿಯಿಂದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದಿ. ಅನಂತ ಕುಮಾರ್ ಅವರ ಒಡನಾಟವನ್ನು ನೆನಪಿಸಿಕೊಂಡರು. ಜೊತೆಗೆ ಕೊರೋನಾ ಸಂಕಷ್ಟದ ಅವಧಿಯಲ್ಲಿ ನಮೋ ನೇತೃತ್ವದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.