ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿ ತಿಂಗಳ ಮನ್ ಕಿ ಬಾತ್ 68ನೇ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ನಮೋ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೇರಳದ ಹಬ್ಬ ಓಣಂ ಸಂಭ್ರಮದ ಬಗ್ಗೆ ಮಾತನಾಡಿದ್ದು, ಈ ಹಬ್ಬ ಅಂತರರಾಷ್ಟ್ರೀಯ ಅಂಗಳವನ್ನು ತಲುಪಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಓಣಂ ಹಬ್ಬ ಆಚರಣೆಯನ್ನು ಸಂಭ್ರಮದಿಂದ ಮಾಡಲಾಗುತ್ತಿದೆ ಎಂದು ಹೇಳಿದರು. ಕೊಲ್ಲಿ ರಾಷ್ಟ್ರಗಳು, ಅಮೆರಿಕ, ಯುರೋಪ್ಗಳಲ್ಲಿಯೂ ಈ ಹಬ್ಬ ಸ್ಥಾನ ಪಡೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಓಣಂ ಪೂಕಳ(ಹೂವಿನ ರಂಗೋಲಿ)ಯನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡಿರುವ ನಮೋ, ಈ ಹಬ್ಬವನ್ನಾಚರಣೆ ಮಾಡುವ ಜನರ ಸಂಭ್ರಮದ ಬಗೆಗೂ ಮಾತನಾಡಿದ್ದಾರೆ. ಆದರೆ ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಹಬ್ಬಗಳನ್ನು ಆಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆಯೂ ಅವರು ಕಿವಿಮಾತು ಹೇಳಿದ್ದಾರೆ.
ಜೊತೆಗೆ ಮಕ್ಕಳ ಆಟಿಕೆಗಳ ತಯಾರಿಕೆಗೆ ನೂತನ ರಾಷ್ಟ್ರೀಯ ನೀತಿಯಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ದೇಶವನ್ನು ಜಾಗತಿಕವಾಗಿ ಮಕ್ಕಳ ಆಟಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ಮುಖ್ಯ ಕೇಂದ್ರವಾಗಿ ಹೊರಹೊಮ್ಮಿಸುವ ಸಲುವಾಗಿ ಈ ನೂತನ ಕಾಯ್ದೆಯಲ್ಲಿ ಗಮನ ಹರಿಸಲಾಗಿದೆ ಎಂದು ನಮೋ ಹೇಳಿದ್ದಾರೆ. ಲಾಕ್ಡನ್ ಸಂದರ್ಭದಲ್ಲಿ ಮಕ್ಕಳ ಬಗೆಗೆ ಚಿಂತನೆ ನಡೆಸುವಾಗ ಈ ಯೋಜನೆ ಹೊಳೆದಿದ್ದು, ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಜಾಗತಿಕವಾಗಿ ಆಟಿಕೆಗಳನ್ನು ತಯಾರಿಸುವವರ ಸಂಖ್ಯೆ ದೇಶದಲ್ಲಿ ಕಡಿಮೆ ಇದ್ದು, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ಸ್ಟಾರ್ಟಪ್ಗಳು ಸ್ಥಳೀಯವಾಗಿ ಆಟಿಕೆ ತಯಾರಿಸುವವರಿಗೆ ಬೆಂಬಲ ನೀಡಬೇಕು. ಕರ್ನಾಟಕದ ಚನ್ನಪಟ್ಟಣ, ಆಂಧ್ರಪ್ರದೇಶದ ಕೊಂಡಪ್ಲಿ, ತಮಿಳುನಾಡಿನ ತಂಜಾವೂರು, ಅಸ್ಸಾಂನ ದುಬ್ರಿ, ಉತ್ತರ ಪ್ರದೇಶದ ವಾರಾಣಸಿ ಸೇರಿದಂತೆ ಇನ್ನೂ ಅನೇಕ ಸ್ಥಳಗಳು ಆಟಿಕೆ ಉತ್ಪನ್ನಗಳ ಕೇಂದ್ರಗಳಾಗಿದ್ದು, ಇವುಗಳನ್ನು ಆಟಿಕೆಗಳ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಮೋ ತಿಳಿಸಿದರು.
ಈ ಸಂದರ್ಭದಲ್ಲಿ ನಮೋ ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಬಗೆಗೂ ಮಾತನಾಡಿದರು. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಶಿಕ್ಷಕರು ನೀಡಿದ ಸೇವೆ ಅಪಾರ. ಲಾಕ್ಡೌನ್ನಿಂದಾಗಿ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ತಾಂತ್ರಿಕತೆ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ನಿಟ್ಟಿನಲ್ಲಿಯೂ ಅನೇಕ ರೀತಿಯ ಅನ್ವೇಷಣೆಗಳು ನಡೆದಿವೆ. ಇವೆಲ್ಲವನ್ನೂ ಬಳಸಿಕೊಂಡು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಶಿಕ್ಷಕರು ಶ್ರಮ ವಹಿಸುತ್ತಿದ್ದಾರೆ. ಕೊರೋನಾ ಸೋಂಕಿನ ಈ ಸವಾಲನ್ನು ಅವಕಾಶವಾಗಿ ಬಳಸಿಕೊಂಡು ಶಿಕ್ಷಕರು ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಲ್ಲದೆ ಕರ್ನಾಟಕದ ಮುಧೋಳ ನಾಯಿ ಸೇರಿದಂತೆ ದೇಶದ ಅನೇಕ ಪ್ರದೇಶಗಳ ಅಸಾಮಾನ್ಯ ನಾಯಿಗಳ ಬಗೆಗೂ ನಮೋ ಮನದ ಮಾತುಗಳನಾನಾಡಿದ್ದಾರೆ. ಚಿಂಗಾರಿ, ಕೂ ಆಪ್ ಸೇರಿದಂತೆ ದೇಶೀಯವಾಗಿ ಆರಂಭ ಮಾಡಲಾದ ಅನೇಕ ಆಪ್ ಗಳ ಬಗೆಗೂ ಈ ಬಾರಿ ನಮೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಣ್ಣ ಪ್ರಮಾಣದ ಆಪ್ಗಳು ಮುಂದಿನ ದಿನಗಳಲ್ಲಿ ಭಾರತವನ್ನು ಜಗತ್ತಿಗೇ ದೊಡ್ಡ ಮಟ್ಟದಲ್ಲಿ ಪರಿಚಯಿಸುವ ಕಂಪೆನಿಗಳಾಗುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆತ್ಮನಿರ್ಭರ ಭಾರತಕ್ಕೆ ಪೂರಕ ಎಂಬಂತೆ ಅನೇಕ ಸ್ವಾವಲಂಬನೆಗೆ ಒತ್ತು ನೀಡುವ ಅಂಶಗಳನ್ನು ಅವರು ಈ ಬಾರಿ ಮನ್ ಕಿ ಬಾತ್ನಲ್ಲಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.