ಚೆನ್ನೈ: ತಮಿಳುನಾಡಿನ ಪುಲ್ಪಾಂಡಿಯನ್ ಎನ್ನುವ ವ್ಯಕ್ತಿಯೊಬ್ಬರು ಕೋವಿಡ್-19 ಪರಿಹಾರ ನಿಧಿಗೆ 90 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಅದರಲ್ಲೇನು ವಿಶೇಷ ಎನ್ನುತ್ತೀರಾ? ಸ್ಥಿತಿವಂತ ಮನುಷ್ಯ ಈ ಹಣವನ್ನು ನೀಡಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಪುಲ್ಪಾಂಡಿಯನ್ ಅವರು ಭಿಕ್ಷೆ ಬೇಡಿ ಜೀವನ ನಡೆಸುವ ವ್ಯಕ್ತಿ.
ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತಾ ಅವರು ಈ ಹಣವನ್ನು ಸಂಗ್ರಹ ಮಾಡಿದ್ದಾರೆ. ಅವರು ಒಂದೇ ಬಾರಿಗೆ ಇಷ್ಟು ಮೊತ್ತವನ್ನು ನೀಡಿಲ್ಲ. ಸಂಗ್ರಹವಾದ ಒಂದಿಷ್ಟು ಮೊತ್ತವನ್ನು ಒಟ್ಟು ಸೇರಿಸುತ್ತಾ ಹಂತ ಹಂತವಾಗಿ ನೀಡಿದ್ದಾರೆ. ಸೋಮವಾರ ಅವರು ತಮ್ಮ 9ನೇ ಕಂತು ಹತ್ತು ಸಾವಿರ ರೂಪಾಯಿಗಳನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರ ಮಾಡಿದ್ದಾರೆ.
ಪುಲ್ಪಾಂಡಿಯನ್ ಅವರು ಮೂಲತಃ ತೂತುಕುಡಿಯವರಾಗಿದ್ದು, ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ವಿಧಿಸಿದ ಬಳಿಕದಿಂದ ಅವರು ಮಧುರೈ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಹೀಗೆ ಸಂಗ್ರಹವಾದ ಹಣವನ್ನು ಅವರು ಕೊರೋನಾ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಗೌರವಿಸುವ ಸಲುವಾಗಿ ಜಿಲ್ಲಾಡಳಿತದ ಅಧಿಕಾರಿಗಳು ಹಲವು ಕಡೆಗಳಲ್ಲಿ ಅವರನ್ನು ಹುಡುಕಾಡಿದ್ದಾರೆ. ಆದರೆ ಅವರು ಸಿಗಲಿಲ್ಲ. ಹೀಗಾಗಿ ಸೋಮವಾರ ಅವರು ಹಣ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ ಅವರಿಗೆ ಫಲಕ ಮತ್ತು ಪ್ರಮಾಣ ಪತ್ರವನ್ನು ನೀಡಿ ಸನ್ಮಾನ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.