ತಿರುವನಂತಪುರ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಭಕ್ತರಿಗೆ ಪ್ರವೇಶ ನಿಷೇಧಿಸಿದ್ದ ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭ ಸ್ವಾಮಿ ದೇವಾಲಯ ಆಗಸ್ಟ್ 26 ಅಂದರೆ ಇಂದಿನಿಂದ ತೊಡಗಿದಂತೆ ಭಕ್ತರ ದರ್ಶನಕ್ಕೆ ತೆರೆದಿದೆ.
ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ ದೇಗುಲದಲ್ಲಿ ನಡೆಯುವ ದೀಪಾರಾಧನೆಯ ವೇಳೆಯವರೆಗೆ ದೇವರ ದರ್ಶನಕ್ಕೆ ಅವಕಾಶವನ್ನು ನೀಡಲಾಗಿರುವುದಾಗಿ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ದರ್ಶನಕ್ಕೆ ಆಗಮಿಸುವ ಭಕ್ತರು ಒಂದು ದಿನಕ್ಕೆ ಮುಂಚಿತವಾಗಿ ಆನ್ಲೈನ್ ಮೂಲಕ ದರ್ಶನದ ಅವಕಾಶವನ್ನು ನಿಗದಿ ಮಾಡಿಕೊಳ್ಳಬೇಕು. ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರಿಜಿಸ್ಟರ್ ಮಾಡಿಕೊಂಡ ನಕಲು ಪ್ರತಿ ಮತ್ತು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಬರುವಂತೆಯೂ ಯಾತ್ರಾರ್ಥಿಗಳಲ್ಲಿ ದೇವಾಲಯದ ಮಂಡಳಿ ಮನವಿ ಮಾಡಿಕೊಂಡಿದೆ.
ದೇವಾಲಯದಲ್ಲಿ ಕೊರೋನಾ ಸೋಂಕು ತಡೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಎಲ್ಲಾ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ. ಜೊತೆಗೆ ಭಕ್ತರು ಮಾಸ್ಕ್ ಧರಿಸುವುದು ಮತ್ತು ಕೈ ತೊಳೆದುಕೊಳ್ಳುವ ಮೂಲಕವೂ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ. ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 21 ರಿಂದ ತೊಡಗಿದಂತೆ ಈವರೆಗೆ ದೇವಾಲಯಕ್ಕೆ ಭಕ್ತರ ಭೇಟಿಗೆ ನಿಷೇಧ ಹೇರಲಾಗಿತ್ತು. ಇದೀಗ ದೇವರ ದರ್ಶನಕ್ಕೆ ಮತ್ತೆ ಅವಕಾಶ ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸರ್ಕಾರದ ಎಲ್ಲಾ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಪ್ರತಿನಿತ್ಯ ದೇವಾಲಯಕ್ಕೆ 665 ರಷ್ಟು ಯಾತ್ರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹಾಗೆಯೇ ಏಕಕಾಲಕ್ಕೆ ಕೇವಲ 35 ಜನರಿಗಷ್ಟೇ ದೇವಾಲಯದೊಳಕ್ಕೆ ಪ್ರವೇಶ ನೀಡಲಾಗುವುದಾಗಿಯೂ ದೇವಾಲಯದ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.