ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕು ವ್ಯಾಪಿಸುವ ತೀವ್ರತೆ ಹೆಚ್ಚಾಗಿದ್ದರೂ, ಅದರ ಭಯ ಸಮಾಜದಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದು. ಈ ಮಾರಕವಾದ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅಂತರರಾಜ್ಯ ಪ್ರಯಾಣಿಕರಿಗೆ ನಿರ್ಬಂಧ ಸೇರಿದಂತೆ ಇನ್ನೂ ಹಲವು ನಿಯಂತ್ರಣ ನಿಯಮಗಳನ್ನು ಈ ಹಿಂದೆ ಜಾರಿಗೊಳಿಸಿತ್ತು. ಆದರೆ ಇದೀಗ ಕೇಂದ್ರ, ರಾಜ್ಯ ಸರ್ಕಾರಗಳು ಈ ನಿಯಮಗಳನ್ನು ಸಡಿಲ ಮಾಡಲು ಆರಂಭಿಸಿದ್ದು, ಅದಕ್ಕನುಗುಣವಾಗಿ ಅಂತರರಾಜ್ಯ ಸಂಚಾರ ನಿರ್ಬಂಧ, ಅಂತರರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್ನಿಂದ ಮುಕ್ತಿ ನೀಡುವತ್ತಲೂ ಗಮನ ಹರಿಸಿದೆ.
ಕರ್ನಾಟಕ ಸರ್ಕಾರವೂ ಅಂತರರಾಜ್ಯ ಪ್ರಯಾಣಕ್ಕೆ ಹೇರಿದ್ದ ನಿರ್ಬಂಧ ಸಡಿಲಿಸಿದ್ದು, ಅಂತರರಾಜ್ಯ ಪ್ರಯಾಣಿಕರ ಕ್ವಾರಂಟೈನ್, ಸ್ಕ್ರೀನಿಂಗ್ ಮೊದಲಾದ ನಿಯಮಗಳನ್ನು ತೆಗೆದು ಹಾಕಿದೆ. ಈ ಹಿಂದೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿದ್ದ ಜನರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಪದ್ಧತಿ ಜಾರಿಯಲ್ಲಿತ್ತು. ಆದರೆ, ಸರ್ಕಾರ ಇದೀಗ ಈ ನಿಯಮವನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ. ಅಂತರರಾಜ್ಯ ಪ್ರಯಾಣ ಸಂಬಂಧಿಸಿದಂತೆ ಹೊಸ ಸುತ್ತೋಲೆಯನ್ನೂ ಕರ್ನಾಟಕ ಸರ್ಕಾರ ಹೊರಡಿಸಿದೆ.
ಈ ಸುತ್ತೋಲೆಯ ಪ್ರಕಾರ, ಈ ವರೆಗೂ ಅಂತರರಾಜ್ಯ ಪ್ರಯಾಣಕ್ಕೆ ಜನರು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಇದರ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ರಾಜ್ಯದ ಗಡಿಗಳಲ್ಲಿ ಹೇರಲಾಗಿದ್ದ ಆರೋಗ್ಯ ತಪಾಸಣೆ, ಕ್ವಾರಂಟೈನ್ ಮೊದಲಾದ ನಿಯಮಗಳೂ ಜಾರಿಯಲ್ಲಿರುವುದಿಲ್ಲ. ಹಾಗೆಯೇ ಜನರು ಅಥವಾ ಸರಕುಗಳು ರಾಜ್ಯದೊಳಕ್ಕೆ ಬರಬೇಕಾಗಿದ್ದರೆ ಸರ್ಕಾರದ ಕಡ್ಡಾಯ ಅನುಮತಿ ಪಡೆಯಬೇಕಿತ್ತು. ಕೊರೋನಾ ಲಕ್ಷಣಗಳು ಇರುವ ರೋಗಿಗಳು ತಾವಾಗಿಯೇ ಕ್ವಾರಂಟೈನ್ ಆಗುವುದು, ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವುದು, ಪಡೆದುಕೊಳ್ಳುವುದು ಇತ್ಯಾದಿ ನಿಯಮಗಳನ್ನು ಸರ್ಕಾರ ಸಡಿಲಿಸಿದೆ.
ಇನ್ನು ಮುಂದೆ ರಾಜ್ಯದಲ್ಲಿ ಅಂತರರಾಜ್ಯ ಪ್ರಯಾಣಿಕರಿಗೆ ಯಾವುದೇ ನಿಬಂಧನೆಗಳು ಇರುವುದಿಲ್ಲ. ಸೋಂಕು ಹರಡದಂತೆ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅವರು ಕರ್ನಾಟಕದ ಒಳಕ್ಕೆ ಪ್ರವೇಶ ಪಡೆಯಬಹುದಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ್ಗೆ ಸಾಬೂನಿನಿಂದ ಕೈ ತೊಳೆಯುವುದು, ಕೊರೋನಾ ಲಕ್ಷಣಗಳಿದ್ದರೆ ಸ್ವಯಂ ನಿರ್ಬಂಧ ಹೇರಿಕೊಳ್ಳುವಂತೆಯೂ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆ ಮೂಲಕ ಕಳೆದ 4-5 ತಿಂಗಳಿನಿಂದ ಸಮಸ್ಯೆ ಎದುರಿಸುತ್ತಿದ್ದ ಅಂತರರಾಜ್ಯ ಪ್ರಯಾಣಿಕರಿಗೆ ನಿರಾಳತೆಯನ್ನು ಕಲ್ಪಿಸಿದೆ ಎಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.