ನವದೆಹಲಿ: ಉತ್ತರ ಪ್ರದೇಶದ ಯೋಗಿ ಸರ್ಕಾರ ಈ ಮೊದಲೇ ಅಳವಡಿಸಿರುವ ಒನ್ ಡಿಸ್ಟ್ರಿಕ್ಟ್, ಒನ್ ಪ್ರಾಡಕ್ಟ್ (ಒಪಿಡಿಪಿ) ಯೋಜನೆಯನ್ನು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನೂ ರೂಪಿಸಿದೆ.
ದೇಶದ ಗ್ರಾಮೀಣ ಭಾಗಗಳಲ್ಲಿನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಪ್ರತಿ ಜಿಲ್ಲೆಗೆ ಒಂದು ಉತ್ಪನ್ನವನ್ನು ಗುರುತಿಸುವ ಉದ್ದೇಶದೊಂದಿಗೆ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದ ತಂಡ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೈಗಾರಿಕಾ ಸಚಿವರುಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಲಿದ್ದಾರೆ. ಈ ಯೋಜನೆಯನ್ನು ಹೇಗೆ ಜಾರಿಗೆ ತರಬಹುದು ಎಂಬ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಜೊತೆಗೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದ್ದು, ಈ ಯೋಜನೆಯ ಕಾರಣದಿಂದಾಗಿ ರಾಜ್ಯದಿಂದಾಗುತ್ತಿದ್ದ ರಫ್ತಿನ ಪ್ರಮಾಣ 30% ಹೆಚ್ಚಾಗಿದೆ ಎಂದು ರಾಜ್ಯದ ಪ್ರಿನ್ಸಿಪಲ್ ಸೆಕ್ರೆಟರಿ ನವನೀತ್ ಸೆಹಗಲ್ ಮಾಹಿತಿ ನೀಡಿದ್ದಾರೆ.
ಜೊತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪಿಯೂಷ್ ಗೋಯಲ್ ಅವರು ಉತ್ತರ ಪ್ರದೇಶದ ಕೈಗಾರಿಕಾ ಮಂತ್ರಿ ಸತೀಶ್ ಅವರಿಗೆ ಪತ್ರವನ್ನು ಬರೆದಿದ್ದು, ಒಡಿಒಪಿಗೆ ಸಂಬಂಧಿಸಿದಂತೆ ಸಾಧ್ಯತೆ ಬಾಧ್ಯತೆಗಳ ಬಗೆಗೂ ಗಮನ ಹರಿಸಿದ್ದಾರೆ. ಉತ್ಪಾದನಾ ವಿಚಾರದಲ್ಲಿ ಗ್ರಾಮೀಣ ಭಾಗಗಳ ಕಾರ್ಮಿಕರು, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಹೊಂದಿರುವ ಸಾಮರ್ಥ್ಯಗಳನ್ನು ಪ್ರಮುಖವಾಗಿ ತಿಳಿಯಪಡಿಸುವಂತೆಯೂ ಅವರಿಗೆ ಸೂಚಿಸಿದ್ದಾರೆ.
ದೇಶದ ಆರ್ಥಿಕತೆಯಲ್ಲಿ ಗ್ರಾಮೀಣ ಪ್ರದೇಶಗಳ ಪಾತ್ರ, ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ಕನಸಿಗೆ ಪೂರಕವಾಗುವಂತೆ ಒಪಿಡಿಪಿಯನ್ನು ಸಚಿವಾಲಯ ಯಾವ ಕ್ರಮ ಕೈಗೊಳ್ಳಬಹುದು, ಕೇಂದ್ರದ ಈ ನಿಲುವಿಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೇಗೆ ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿದೆ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸುವುದು, ಯಾವ ಜಿಲ್ಲೆಗೆ ಯಾವ ವಸ್ತುವನ್ನು ಹೆಚ್ಚು ಪ್ರಮಾಣದಲ್ಲಿ, ಗುಣಮಟ್ಟಕ್ಕೆ ಚ್ಯುತಿಯಾಗದಂತೆ ಉತ್ಪಾದಿಸಲು ಸಾಧ್ಯವಿದೆ ಎಂಬುದನ್ನು ಗಮನಿಸಿಕೊಂಡು, ಆ ಜಿಲ್ಲೆಗೆ ಅದು ಉತ್ಪಾದನೆ ಮಾಡಲಿರುವ ವಸ್ತುವಿಗಾಗಿ ಕ್ಲಸ್ಟರ್ ಒಂದನ್ನು ಅಭಿವೃದ್ಧಿ ಮಾಡುವ ಯೋಜನೆಯೂ ಕೇಂದ್ರ ಸರ್ಕಾರದ ಕಾರ್ಯಸೂಚಿಯಲ್ಲಿದೆ.
ಕೊರೋನಾ ಕಾರಣದಿಂದಾಗಿ ದೇಶದೆಲ್ಲೆಡೆ ಹರಿದು ಹೋಗಿದ್ದ ವಲಸಿಗರು ಮತ್ತೆ ತಮ್ಮ ತಮ್ಮ ಊರುಗಳನ್ನು ಸೇರುವಂತಾಗಿದ್ದು, ಈ ವಿಚಾರವನ್ನು ಅವಕಾಶವಾಗಿ ಬಳಸಿಕೊಂಡು ಉತ್ಪಾದನಾ ಪ್ರಮಾಣ ಹೆಚ್ಚಿಸಿ ಜಾಗತಿಕವಾಗಿ ದೇಶ ಅಭಿವೃದ್ಧಿ ಹೊಂದುವಂತೆ ಮಾಡುವ ಕನಸನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿ, ಆರ್ಥಿಕತೆ ಸಶಕ್ತಗೊಳಿಸಲು ಪ್ರಯತ್ನ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.