ನವದೆಹಲಿ: ಆತ್ಮನಿರ್ಭರ ಭಾರತ ಉಪಕ್ರಮವನ್ನು ಉತ್ತೇಜಿಸುವ ಸಲುವಾಗಿ, ಆಮದನ್ನು ಕಡಿಮೆ ಮಾಡಲು ಇಂಧನ ವಲಯವು ವಿದ್ಯುತ್ ಪರಿಕರಗಳನ್ನು ದೇಶದಲ್ಲಿ ಉತ್ಪಾದಿಸುವ ಮತ್ತು ಸಂಗ್ರಹಿಸುವ ಭರವಸೆಯನ್ನು ನೀಡಿದೆ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ ಸಿಂಗ್ ಹೇಳಿದ್ದಾರೆ.
“ನಾವು ತುಂಬಾ ಬಲಿಷ್ಠ ಹೆಜ್ಜೆಯನ್ನು ಮುಂದಿಟ್ಟಿದ್ದೇವೆ. ವಿದ್ಯುತ್ ವಲಯದ ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸಿದ್ದೇವೆ. ವಿದ್ಯುತ್ ಉತ್ಪಾದನೆ, ಟ್ರಾನ್ಸ್ಮಿಷನ್ ಮತ್ತು ವಿತರಣೆಗೆ ಸಂಬಂಧಿಸಿದ ಎಲ್ಲವನ್ನು ನಾವೇ ಉತ್ಪಾದನೆ ಮಾಡಲಿದ್ದೇವೆ. ಕೆಲವೊಂದು ಪರಿಕರಗಳನ್ನು ಬಿಟ್ಟರೆ ಬೇರೆ ಯಾವುದನ್ನು ಇಂಧನ ವಲಯಕ್ಕಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಕೇವಲ 30 ಪರಿಕರಗಳನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆ ಇದೆ” ಎಂದಿದ್ದಾರೆ.
“ಪ್ರಸ್ತುತ ಸುಮಾರು 600 ಪರಿಕರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಹೆಚ್ಚಿನವುಗಳನ್ನು ನಾವು ದೇಶದಲ್ಲೇ ಉತ್ಪಾದನೆ ಮಾಡಬಹುದು. ಆದರೆ ನಾವು ಕೇವಲ 350 ವಸ್ತುಗಳನ್ನು ಮಾತ್ರ ಇಲ್ಲಿ ಉತ್ಪಾದನೆ ಮಾಡುತ್ತಿದ್ದೇವೆ. ಉಳಿದವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಸಭೆಯಲ್ಲಿ, ಭಾರತದಲ್ಲಿ ಉತ್ಪಾದನೆ ಮಾಡಬಹುದಾದ ಪರಿಕರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಬೇಡ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಿವಿಧ ಸಚಿವಾಲಯಗಳ ಜೊತೆ ಕೂಡ ನಾನು ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಅವುಗಳು ಕೂಡ ವಿದೇಶದಿಂದ ಆಮದು ಬೇಡ ಎಂಬ ನಮ್ಮ ಮನವಿಗೆ ಒಮ್ಮತ ಸೂಚಿಸಿವೆ” ಎಂದಿದ್ದಾರೆ.
ಆತ್ಮನಿರ್ಭರ ಭಾರತ ಮಾತ್ರವಲ್ಲದೆ, ವಿದ್ಯುತ್ ಪರಿಕರಗಳ ಆಮದು ಮಾಡದೇ ಇರುವ ನಿರ್ಧಾರದ ಹಿಂದೆ ಭದ್ರತಾ ಆಯಾಮವು ಕೂಡ ಇದೆ ಎಂದು ಸಚಿವರು ಹೇಳಿದ್ದಾರೆ.
ವಿದ್ಯುತ್ ವಲಯವು ರಕ್ಷಣೆ, ಅಗತ್ಯ ಸೇವೆಗಳು, ಸಂವಹನ, ದತ್ತಾಂಶ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣದಿಂದಾಗಿ ವಿದ್ಯುತ್ ಪರಿಕರಗಳ ಆಮದುಗಳ ಮೇಲೆ ವಿವಿಧ ದೇಶಗಳು ನಿರ್ಬಂಧಗಳನ್ನು ವಿಧಿಸಿದೆ. ನಾವು ಕೂಡ ಈ ವ್ಯವಸ್ಥೆಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.