ಬೆಂಗಳೂರು: ಸೆಪ್ಟೆಂಬರ್ 21 ರಿಂದ ತೊಡಗಿದಂತೆ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ರಾಜ್ಯಪಾಲರು ಅನುಮೋದನೆ ನೀಡಿರುವ 16 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ವಿಪಕ್ಷಗಳು ಆಡಳಿತ ಪಕ್ಷ ಜಾರಿಗೊಳಿಸಲಿರುವ ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದಂತೆ ಅಧಿವೇಶನದ ಒಳಗೆ ಮತ್ತು ಹೊರಗೂ ಹೋರಾಟ ನಡೆಸುವುದಕ್ಕೂ ಕಾರ್ಯತಂತ್ರ ರೂಪಿಸುತ್ತಿದೆ.
ಮುಂದಿನ ಅಧಿವೇಶನದ ಬಗ್ಗೆ ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಆರ್ಟಿಕಲ್ 174(1) ಅಡಿಯಲ್ಲಿ ಅಧಿವೇಶನಗಳನ್ನು ನಡೆಸಲು ಸರ್ಕಾರ ಬಾಧ್ಯತೆಗಳನ್ನು ಹೊಂದಿದ್ದು, ಈ ಅಧಿವೇಶನವು ನಡುವಿನ ಅಂತರ ಆರು ತಿಂಗಳಿಗಿಂತ ಹೆಚ್ಚಾಗಿರಬಾರದು ಎಂದು ಹೇಳುತ್ತದೆ. ಆದರೆ ಕೊರೋನಾ ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ಶಾಸಕಾಂಗ ಅಧಿವೇಶನವನ್ನು ಈ ಬಾರಿ ರಾಜ್ಯ ಸರ್ಕಾರ ನಡೆಸಿರಲಿಲ್ಲ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಮಾರ್ಚ್ 2020 ರ ವೇಳೆಗೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಆಕ್ಟ್ , ಕರ್ನಾಟಕ ಎಪಿಡಮಿಕ್ ಆಕ್ಟ್ ಸೇರಿದಂತೆ 16 ರೀತಿಯ ಆರ್ಡಿನನ್ಸ್ಗಳನ್ನು ಜಾರಿಗೊಳಿಸಿದೆ. ಅಧಿವೇಶನಗಳು ಇಲ್ಲದೇ ಇರುವ ಸಂದರ್ಭದಲ್ಲಿ ಅಂಗೀಕರಿಸಲಾದ ಸುಗ್ರೀವಾಜ್ಞೆಗಳನ್ನು ಅಸೆಂಬ್ಲಿಯ ಮುಂದಿರಿಸಿ ಉಭಯ ಸದನಗಳಿಂದ ಅನುಮೋದನೆ ಪಡೆಯಬೇಕು. ಈ ರೀತಿಯಲ್ಲಿ ಅನುಮೋದನೆ ಸಿಗದೇ ಹೋದಲ್ಲಿ ಅಧಿವೇಶನ ಮುಗಿದ ಆರು ವಾರಗಳವರೆಗಷ್ಟೇ ಈ ಕಾಯ್ದೆಗಳು ಮಾನ್ಯವಾಗಿರುತ್ತದೆ. ಬಳಿಕ ಕಾಯ್ದೆ ಅಮಾನ್ಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದನವು ಸರ್ವೋಚ್ಛವಾಗಿದ್ದು, ಶಾಸಕಾಂಗವು ಸುಗ್ರೀವಾಜ್ಞೆಗಳನ್ನು ಬದಲಾವಣೆ ಮಾಡುವ ಅಧಿಕಾರ ಹೊಂದಿದೆ ಎಂದೂ ಅವರು ಹೇಳಿದ್ದಾರೆ.
ಇನ್ನು ಲೋಕಾಯುಕ್ತದ ವರದಿಗಳನ್ನು ಪರಿಶೀಲನೆ ನಡೆಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ನಾಯಕತ್ವದ ಉಪ ಸಮಿತಿಯನ್ನೂ ರಾಜ್ಯ ಸರ್ಕಾರ ರೂಪಿಸಿದೆ. ಈ ಸಮಿತಿಯಲ್ಲಿ ಸಚಿವರಾದ ಈಶ್ವರಪ್ಪ, ಆರ್. ಅಶೋಕ್, ಎಸ್. ಸುರೇಶ್ ಕುಮಾರ್, ಜೆ.ಸಿ. ಮಾಧುಸ್ವಾಮಿ, ಶಶಿಕಲಾ ಜೊಲ್ಲೆ ಮೊದಲಾದವರಿದ್ದು ಶಿಫಾರಸ್ಸುಗಳನ್ನು ಪರಿಶೀಲನೆ ನಡೆಸಿ, ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.