ಬೆಂಗಳೂರು: ರಾಜ್ಯದ ಸಚಿವ ಸಂಪುಟದ ಮಂತ್ರಿಗಳ ಬಳಿಕ ಇದೀಗ ಯಡಿಯೂರಪ್ಪ ಅವರೂ ದೆಹಲಿಗೆ ತೆರಳುವ ಸಾಧ್ಯತೆಗಳು ಕಂಡುಬರುತ್ತಿದೆ. ಈ ಭೇಟಿಯಲ್ಲಿ ಸಿಎಂ ಪಕ್ಷದ ಹೈಕಮಾಂಡ್ ಜೊತೆಗೆ ಸಂಪುಟ ವಿಸ್ತರಣೆಯೂ ಸೇರಿದಂತೆ ಅನೇಕ ವಿಷಯಗಳ ಜೊತೆಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 21 ರಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗುವ ಮೊದಲೇ ಅಂದರೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ಯಡಿಯೂರಪ್ಪ ದೆಹಲಿಗೆ ತೆರಳಿ ಪಕ್ಷದ ನಾಯಕರನ್ನು ಭೇಟಿಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅನೇಕ ಬಾರಿ ಯಡಿಯೂರಪ್ಪ ಅವರು ದೆಹಲಿ ಯಾತ್ರೆ ಕೈಗೊಂಡಿದ್ದರು. ಖಾತೆ ಹಂಚಿಕೆ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಹೊರಬಂದ 10 ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭಗಳಲ್ಲಿಯೂ ಅವರು ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದರು. ಬಳಿಕ ಕೊರೋನಾ ಲಾಕ್ಡೌನ್ ಆರಂಭವಾಗಿದ್ದು, ಸಿಎಂ ಸಹ ಸೋಂಕಿಗೆ ತುತ್ತಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಮುಖ್ಯಮಂತ್ರಿ ಅವರ ಕಛೇರಿಯ ಮೂಲಗಳ ಪ್ರಕಾರ, ಅವರು ಸೆಪ್ಟೆಂಬರ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ಜೊತೆಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ತಿಂಗಳ ಅಂತ್ಯದವರೆಗೂ ಅವರೊಂದಿಗೆ ಸಿಎಂ ಭೇಟಿ ಸಾಧ್ಯವಾಗುವ ಸಂದರ್ಭ ಕಡಿಮೆ. ಈ ಹಿನ್ನೆಲೆಯಲ್ಲಿ ಅವರು ಸೆಪ್ಟೆಂಬರ್ ತಿಂಗಳ ಮೊದಲ ಯಾ ಎರಡನೇ ವಾರದಲ್ಲಿ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ಐದು ಸಂಪುಟ ಸ್ಥಾನಗಳು ಖಾಲಿ ಇದ್ದು, ಈ ಸ್ಥಾನಗಳನ್ನು ಎಚ್. ವಿಶ್ವನಾಥ್, ಎಂ.ಟಿ. ಬಿ. ನಾಗರಾಜ್ ಅವರನ್ನೊಳಗೊಂಡು ಕೆಲವು ಹೊಸ ಎಂ.ಎಲ್.ಸಿ. ಗಳಿಗೆ ಹಂಚುವ ಸಂಬಂಧವೂ ಹೈಕಮಾಂಡ್ ಜೊತೆಗೆ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ ಎಂದೂ ಮಾಹಿತಿ ಇದೆ. ಸಿಎಂ ದೆಹಲಿ ಯಾತ್ರೆ ಕೇಂದ್ರದ ನಾಯಕರ ಲಭ್ಯತೆಯ ಮೇಲೆ ಅವಲಂಬಿತವಾಗಿರಲಿದೆ ಎಂದೂ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರು ಗಲಭೆ, ಎಸ್ಡಿಪಿಐ ನಿಷೇಧ ಮೊದಲಾದ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂಬ ಮಾಹಿತಿಗಳೂ ಲಭ್ಯವಾಗಿದೆ. ಗಲಭೆಯ ಪರಿಣಾಮಗಳ ಬಗ್ಗೆಯೂ ಕೇಂದ್ರದ ನಾಯಕರಿಗೆ ಸಿಎಂ ವರದಿ ನೀಡುವ ಸಾಧ್ಯತೆಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.