ಬೆಂಗಳೂರು: ಸೌತ್ವೆಸ್ಟರ್ನ್ ರೈಲ್ವೆಯು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ನೀಡಲು ತೀರ್ಮಾನಿಸಿದ್ದು, ಕೇವಲ 30 ರೂ. ಗಳಲ್ಲಿ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಕೆಐಎಗೆ ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗುವಂತೆ ಯೋಜನೆಗಳನ್ನು ರೂಪಿಸಲು ಮುಂದಾಗಿದೆ.
ಈ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮೋದನೆಯನ್ನೂ ಪಡೆದುಕೊಂಡಿದೆ. ಈ ಸೇವೆಯನ್ನು ಆರಂಭ ಮಾಡಲು ಪೂರಕವಾಗಿ ವಿಮಾನ ನಿಲ್ದಾಣದ ಆಸುಪಾಸಿನ ರೈಲು ನಿಲ್ದಾಣಗಳ ಕಾಮಗಾರಿಯನ್ನೂ ಸೆಪ್ಟೆಂಬರ್ ತಿಂಗಳೊಳಗಾಗಿ ಮುಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದೆ.
ಈ ಬಗ್ಗೆ ಎಸ್ಡಬ್ಲ್ಯುಆರ್ನ ಮುಖ್ಯ ಪ್ರೊ. ಇ. ವಿಜಯ್ ಅವರು ಮಾಹಿತಿ ನೀಡಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಕಡಿಮೆ ಅವಧಿ ಮತ್ತು ವೆಚ್ಚದಲ್ಲಿ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ತಲುಪಲು ಸಾಧ್ಯವಾಗುವಂತಹ ಕ್ರಮವೊಂದನ್ನು ಗರಿಷ್ಠ ವೇಗದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯೋಚಿಸಲಾಗಿದೆ. ಈ ಬಗ್ಗೆ ಬೆಂಗಳೂರು ಏರ್ಪೋರ್ಟ್ ಲಿ. ಜೊತೆಗೆ ಸಮಾಲೋಚನೆ ನಡೆಸಿ, ಸಮಯವನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲವೂ ಯೋಚಿಸಿದಂತೆಯೇ ನಡೆದರೆ ಮೂಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ನೌಕರರಿಗೆ ಮತ್ತು ಪ್ರಯಾಣಿಕರಿಗೆ ಕಡಿಮೆ ಸಮಯದಲ್ಲಿ ಕೇವಲ 30 ರೂ. ಗಳಿಗೆ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗಲಿದೆ ಎಂದೂ ಅವರು ಹೇಳಿದ್ದಾರೆ. ಈ ಎಕ್ಸ್ಪ್ರೆಸ್ ರೈಲು ಯಶವಂತಪುರ ಮಾರ್ಗವಾಗಿ ಕಾರ್ಯಾಚರಿಸಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. 30-35 ನಿಮಿಷಗಳೊಳಗಾಗಿ ಈ ರೈಲುಗಳ ಮೂಲಕ ವಿಮಾನ ನಿಲ್ದಾಣ ತಲುಪಲು ಸಾಧ್ಯವಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪಲು ಒಂದು ಗಂಟೆಗೂ ಅಧಿಕ ಸಮಯ ಬೇಕಾಗಿದೆ. ಜೊತೆಗೆ ಖಾಸಗಿ ವಾಹನಗಳಲ್ಲಿ ಈ ಪ್ರಯಾಣದ ವೆಚ್ಚವೂ ಹೆಚ್ಚು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಹಳ ಹಿಂದಿನಿಂದಲೂ ರೈಲು ಸೇವೆ ಆರಂಭಕ್ಕಾಗಿ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಸದ್ಯ ರೈಲು ಸೇವೆ ನೀಡಲು ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ನಿರೀಕ್ಷಿತ ರೈಲು ನಿಲ್ದಾಣ ದೇವನಹಳ್ಳಿ- ದೊಡ್ಡ ಜಾಲದ ನಡುವೆ ಇರಲಿದ್ದು, ಸೆಪ್ಟೆಂಬರ್ 2020 ಗೆ ಕಾಮಗಾರಿ ಸಂಪೂರ್ಣವಾಗಲಿದೆ. ಹಾಗೆಯೇ ಸುಮಾರು 3 ಕೋಟಿ ರೂ. ಗಳಲ್ಲಿ ಸಕಲ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಈ ನಿಲ್ದಾಣ ನಿರ್ಮಾಣವಾಗಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.