ಅಹ್ಮದಾಬಾದ್: ಭಾರತಕ್ಕೆ ಅಧ್ಯಯನಕ್ಕಾಗಿ ಆಗಮಿಸಿರುವ ನೇಪಾಳದ ಬಡ ರೈತ ಕುಟುಂಬದ ಆಶಿಕ್ ಜೈಸ್ವಾಲ್ ಅವರು ಪ್ರಸ್ತುತ ದೇಶದ ಪ್ರಖ್ಯಾತ ಸಂಸ್ಥೆ ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಆಹಾರ ಮತ್ತು ಕೃಷಿ ವ್ಯವಹಾರ ನಿರ್ವಹಣೆ (ಪಿಜಿಪಿಎಫ್ಎಬಿಎಂ)
ಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಪ್ರವೇಶ ಪಡೆದಿದ್ದಾರೆ. ಓದುವ ಕನಸಿದ್ದರೂ, ತಮ್ಮ 2 ವರ್ಷಗಳ ಶಿಕ್ಷಣಕ್ಕಾಗಿ ದೊಡ್ಡ ಮೊತ್ತದ ಶುಲ್ಕವನ್ನು ಹೊಂದಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಜೈಸ್ವಾಲ್ ಅವರದ್ದಾಗಿದೆ.
ಮೂಲತಃ ನೇಪಾಳದ ಗಡಿ ಪ್ರದೇಶವಾದ ಚಂಪಾರಣ್ ನಲ್ಲಿ ವಾಸಿಸುವ ಜೈಸ್ವಾಲ್ ಕುಟುಂಬ ಆರ್ಥಿಕವಾಗಿ ಹೆಚ್ಚು ಸದೃಢವಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಉನ್ನತ ಶಿಕ್ಷಣದ ಕನಸನ್ನು ಹೊತ್ತ ಇವರು ಭಾರತದ ರಾಯಭಾರಿ ಕಛೇರಿಯಿಂದ ಪಡೆದ ವಿದ್ಯಾರ್ಥಿ ವೇತನದಲ್ಲಿ ಪ್ರಯಾಗರಾಜ್ ನಲ್ಲಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಬಳಿಕ ಐಐಎಂಎನಲ್ಲಿ ಪ್ರವೇಶ ಪಡೆಯಲು ಸಿಎಟಿ ಪರೀಕ್ಷೆ ಬರೆದು ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಅಧ್ಯಯನಕ್ಕಾಗಿ ಪಾವತಿಸಬೇಕಾದ ದೊಡ್ಡ ಮೊತ್ತದ ಶುಲ್ಕವನ್ನು ಭರಿಸುವಲ್ಲಿ ಅವರು ಸಮರ್ಥರಲ್ಲದೇ ಇದ್ದು, ಸದ್ಯ ಇವರ ಸಮಸ್ಯೆಯನ್ನು ಅರಿತ ಅನೇಕ ಮಂದಿ ಭಾರತೀಯರು ಇವರಿಗೆ ಶಿಕ್ಷಣ ಪೂರೈಸುವಲ್ಲಿ ಅಗತ್ಯವಾದ ಮೊತ್ತವನ್ನು ನೀಡಲು ಮುಂದಾಗಿದ್ದಾರೆ.
ಕೊರೋನಾ ಸಂಕಷ್ಟದಿಂದಾಗಿ ಭಾರತದಲ್ಲಿದ್ದ ಇವರ ಸಂಬಂಧಿಕರಿಂದಲೂ ಇವರಿಗೆ ನೆರವು ದೊರೆಯುವುದು ಕಷ್ಟವಾಗಿದೆ. ವಿದೇಶೀ ಪ್ರಜೆ ಎಂಬ ಕಾರಣಕ್ಕೆ ಭಾರತೀಯ ಬ್ಯಾಂಕ್ ಗಳು ಇವರಿಗೆ ಶಿಕ್ಷಣ ಸಾಲ ಕೊಡುವಂತಿಲ್ಲ. ಜೊತೆಗೆ ಆಸ್ತಿ ಮಾರಾಟ ಮಾಡಿ ಹಣ ಹೊಂದಿಸಿಕೊಂಡು ಶಿಕ್ಷಣ ಪಡೆದುಕೊಳ್ಳುವಷ್ಟು ಸಿರಿತನವೂ ಇವರಿಗಿಲ್ಲ. ಹಾಗೆಯೇ ಯಾವುದೇ ಆರ್ಥಿಕ ಹಿನ್ನೆಲೆ ಗಟ್ಟಿಯಾಗಿರದ ಹುಡುಗನಿಗೆ ಸಾಲ ನೀಡಲು ಅವರ ದೇಶದ ಬ್ಯಾಂಕ್ ಗಳೂ ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ಮಾರ್ಗದರ್ಶಿ ಅಭಿಷೇಕ್ ಶ್ರೀವಾಸ್ತವ್ ಅವರ ಸಹಕಾರದೊಂದಿಗೆ ದೇಶದ ಕೆಲವು ವ್ಯಕ್ತಿಗಳು, ಸಂಸ್ಥೆಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಅದರಂತೆ ಅವರ ಸಮಸ್ಯೆಗೆ ಪರಿಹಾರವಾಗಿ ಅನೇಕ ಭಾರತೀಯರು ಸಹ ಅವರಿಗೆ ಹಣಕಾಸಿನ ನೆರವನ್ನು ನೀಡುವ ಮೂಲಕ ಶಿಕ್ಷಣದ ಆಸೆಯನ್ನು ಪೂರೈಸಲು ಸಹಕರಿಸಿದ್ದಾರೆ.
ಅಹಮದಾಬಾದ್ನ ಎನ್ಜಿಒ, ಅನೇಕ ಉದ್ಯಮಿಗಳೂ ಈ ಹುಡುಗನಿಗೆ ಹಣಕಾಸಿನ ನೆರವನ್ನು ನೀಡಿದ್ದಾರೆ. ಮೊದಲ ವರ್ಷಕ್ಕೆ ಬೇಕಾದ ಹಣವನ್ನು ಹೊಂದಿಸಿಕೊಳ್ಳುತ್ತಿರುವ ಜೈಸ್ವಾಲ್ ಅವರಿಗೆ ಸಾಕಷ್ಟು ಮಂದಿ ಭಾರತೀಯರು ಸಹಾಯ ಮಾಡಿದ್ದಾರೆ. ಹೀಗಿದ್ದರೂ ಉದ್ದೇಶಿತ ಶುಲ್ಕವನ್ನು ಭರಿಸುವಲ್ಲಿ ಸಂಪೂರ್ಣವಾಗಿ ಸಫಲರಾಗಿಲ್ಲ. ಇದರ ಜೊತೆಗೆ ಎರಡನೇ ವರ್ಷದ ಹಣವನ್ನು ಹೊಂದಿಸಿಕೊಳ್ಳುವ ಸವಾಲು ಸಹ ಅವರ ಮುಂದಿದೆ. ಈ ಸಂಬಂಧ ಅವರು ಮತ್ತಷ್ಟು ಭಾರತೀಯರಿಂದ ನೆರವು ಯಾಚಿಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಜೊತೆಗೂ ಮಾತುಕತೆ ನಡೆಸುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ಇಚ್ಚಿಸುವವರು aashikjayswal8@gmail.com ನಲ್ಲಿ ಅವರನ್ನು ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.