ಬೀಜಿಂಗ್: ಈ ವರೆಗೆ ಭಾರತದ ಮೇಲೆ ಅಪ್ರಚೋದಿತ ಸಂಘರ್ಷ, ಕೊರೋನಾ ವಿಚಾರಗಳಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಂದಲೂ ಅವಗಣನೆಗೆ ಒಳಗಾಗಿರುವ ಚೀನಾ, ಈಗ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆಯೂ ಸುದ್ದಿಯಾಗಿದೆ.
ದೇಶದಲ್ಲಿ ಅಲ್ಪಸಂಖ್ಯಾತರೆನಿಸಿರುವ ಕ್ರೈಸ್ತ ಸಮುದಾಯದ ಮೇಲೆ ದೌರ್ಜನ್ಯ ಎಸಗುವ ಮೂಲಕ ಕಮ್ಯುನಿಸ್ಟ್ ತನ್ನ ಕೀಳು ಬುದ್ಧಿಯನ್ನು ಪ್ರದರ್ಶಿಸಲಾರಂಭಿಸಿದೆ. ಕ್ರೈಸ್ತರ ಮನೆಗಳಲ್ಲಿ ಕ್ರಾಸ್, ಜೀಸಸ್ ನ ಚಿತ್ರಗಳನ್ನು ಬಲವಂತವಾಗಿ ತೆಗೆಸುವ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಅವುಗಳ ಬದಲಾಗಿ ಕಮ್ಯುನಿಸ್ಟ್ ನಾಯಕರ ಭಾವಚಿತ್ರಗಳನ್ನಿಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿಯನ್ನು ಬಿತ್ತರಿಸಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷ ತನ್ನ ಸಿದ್ಧಾಂತಗಳನ್ನು ಜನರ ಧಾರ್ಮಿಕ ನಂಬಿಕೆಗಳ ಮೇಲೆಯೂ ಹೇರುವ ಪ್ರಯತ್ನ ನಡೆಸುತ್ತಿದೆ. ಜಿಯಾಂಗ್ಸು, ಹೆಬೀ ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಲ್ಲಿ ಜೀಸಸ್, ಶಿಲುಬೆ ಇತ್ಯಾದಿಗಳನ್ನು ತೆಗೆದು ಹಾಕಿ ಅವುಗಳ ಜಾಗದಲ್ಲಿ ಕಮ್ಯುನಿಸ್ಟ್ ನಾಯಕರ ಚಿತ್ರಗಳನ್ನಿಡುವಂತೆಯೂ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜೊತೆಗೆ ಚರ್ಚ್ ಗಳಿಗೂ ತೆರಳಿ ಕ್ರೈಸ್ತರ ನಂಬಿಕೆಗಳನ್ನು ಹಾಳುಗೆಡಹುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅಲ್ಲಿರುವ ಏಸುವಿನ ಪ್ರತಿಮೆ, ಶಿಲುಬೆ ಸೇರಿದಂತೆ ಇನ್ನಿತರ ವಸ್ತುಗಳೂ ಅಧಿಕಾರಿಗಳ ಅಟ್ಟಹಾಸಕ್ಕೆ ಬಲಿಯಾಗಿವೆ. ಈ ಹಿಂದೆ ಕ್ಸಿಂಜಿಯಾಂಗ್ ನಲ್ಲಿ ಮಸ್ಲಿಮರ ಮೇಲೆಯೂ ದೌರ್ಜನ್ಯ ಎಸಗಿರುವ ಚೀನಾದ ವಿರುದ್ಧ ಜಾಗತಿಕ ಮಟ್ಟದಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಇದೀಗ ಕ್ರೈಸ್ತರ ಧಾರ್ಮಿಕತೆಯ ಮೇಲೆಯೂ ಸವಾರಿ ಮಾಡುವ ಕೆಲಸವನ್ನು ಚೀನಾ ಮಾಡುತ್ತಿದೆ.
ಕಳೆದ ವರ್ಷವಷ್ಟೇ ಚೀನಾ ಅಲ್ಲಿನ ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿ ಸಮಾಜವಾದಿ ತತ್ವಗಳನ್ನಳವಡಿಸುವಂತೆ ಸೂಚಿಸಿತ್ತು. ಜೊತೆಗೆ ಸರ್ಕಾರದ ವಿರುದ್ಧ ಯಾವುದೇ ತತ್ವಗಳಿರಬಾರದು ಎಂಬ ಆದೇಶವನ್ನು ಹೊರಡಿಸಿತ್ತು. ಇನ್ನು ಶಿವಾನ್ ನ ಕ್ರೈಸ್ಟ್ ಚರ್ಚ್ ನಲ್ಲಿಯೂ ಅಧಿಕಾರಿಗಳು ಏಸುವಿನ ಪ್ರತಿಮೆ, ಶಿಲುಬೆ ಸೇರಿದಂತೆ ಇನ್ನಿತರ ಧಾರ್ಮಿಕ ನಂಬಿಕೆಗಳನ್ನು ಹಾಳುಗೆಡವಲು ತೆರಳಿದ್ದಾಗ ಅಲ್ಲಿ ಕಮ್ಯುನಿಸ್ಟ್ ಅಧಿಕಾರಿಗಳ ವಿರುದ್ಧ ಜನರು ಪ್ರತಿರೋಧವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.