ನವದೆಹಲಿ: ಎರಡನೇ ಅವಧಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಒಂದು ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಬಹಿರಂಗ ಪತ್ರವನ್ನು ಶನಿವಾರ ಬರೆದಿದ್ದಾರೆ. ಈ ಪತ್ರದಲ್ಲಿ ತಮ್ಮ ಸರಕಾರದ ಹಲವಾರು ಸಾಧನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ತ್ರಿವಳಿ ತಲಾಕ್ ನಿಷೇಧ, ಸಂವಿಧಾನದ 370ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಹೀಗೆ ಹಲವು ಸಾಧನೆಗಳ ಬಗ್ಗೆ ಅವರು ಪಟ್ಟಿಮಾಡಿದ್ದಾರೆ.
2019ರಲ್ಲಿ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ, ಭಾರತವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯುವ ಮತ್ತು ಜಾಗತಿಕ ನಾಯಕನನ್ನಾಗಿ ಮಾಡುವ ಭರವಸೆಯನ್ನು ನಾಗರಿಕರಿಗೆ ನೀಡಿದ್ದರು. ಕಳೆದ ಒಂದು ವರ್ಷದಲ್ಲಿ ಅವರ ಸರಕಾರ ತೆಗೆದುಕೊಂಡ ನಿರ್ಧಾರಗಳು ಈ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ದಿದೆ.
370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿರುವುದು ಮೋದಿ ಸರಕಾರದ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದು. ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಇದು ಬಲಿಷ್ಠ ಪಡಿಸಿದೆ.
ಸುಪ್ರೀಂಕೋರ್ಟ್ನ ಮಹತ್ವದ ತೀರ್ಪಿಗೆ ಅನುಗುಣವಾಗಿ ಐತಿಹಾಸಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾಮಗಾರಿಯು ಆರಂಭಗೊಂಡಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರ ನೇಮಕ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ ಮತ್ತು ರಕ್ಷಣಾ ಪಡೆಗಳ ಸುಧಾರಣೆಗೆ ಹೆಚ್ಚಿನ ಬಲವನ್ನು ನೀಡಿದೆ. ಮೂರು ಸೇನೆಗಳ ನಡುವೆ ಈ ಹುದ್ದೆಯು ಸಮನ್ವಯವನ್ನು ಸಾಧಿಸುವ ಕಾರ್ಯವನ್ನು ಮಾಡುತ್ತಿದೆ.
ಪ್ರಧಾನಿ ಮೋದಿ ಅವರು ಪತ್ರದಲ್ಲಿ ತಮ್ಮ ಸರಕಾರ ರೂಪಿಸಿದ ಹಲವಾರು ಜನಸ್ನೇಹಿ ಕಾನೂನುಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೆ, ಸಂಸತ್ತು ಪ್ರತಿಫಲ ನೀಡುವುದರಲ್ಲಿ ದಶಕಗಳ ದಾಖಲೆಯನ್ನು ಮುರಿದಿದೆ ಎಂಬುದನ್ನೂ ಉಲ್ಲೇಖ ಮಾಡಿದ್ದಾರೆ.
ಕೊರೋನವೈರಸ್ ಸಾಂಕ್ರಾಮಿಕ ರೋಗ ಮತ್ತು ಅದು ಹೇಗೆ ಭಾರತೀಯರ ಆಕಾಂಕ್ಷೆ ಮತ್ತು ಆಶೋತ್ತರಗಳಿಗೆ ಅಡ್ಡಿ ಉಂಟುಮಾಡಿದೆ ಎಂಬ ಬಗ್ಗೆ ಉಲ್ಲೇಖ ಮಾಡಿರುವ ಮೋದಿ, “ಒಂದು ಕಡೆ ಶ್ರೇಷ್ಠ ಆರ್ಥಿಕ ಸಂಪನ್ಮೂಲಗಳಿಂದ ನಮ್ಮ ಕೈಗಳು ಶಕ್ತಿದಾಯಕವಾಗಿವೆ ಮತ್ತು ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಗಳು ನಮ್ಮ ಬಳಿ ಇವೆ. ಇನ್ನೊಂದೆಡೆ ನಮ್ಮ ದೇಶವು ಭಾರಿ ಜನಸಂಖ್ಯೆ ಮತ್ತು ಮಿತ ಸಂಪನ್ಮೂಲಗಳ ಸಮಸ್ಯೆಯನ್ನು ಎದುರಿಸುತ್ತಿದೆ” ಎಂದಿದ್ದಾರೆ.
“ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಉದ್ದಿಮೆಗಳು ದೊಡ್ಡಮಟ್ಟದ ಸಂಕಷ್ಟ ಎದುರಿಸುತ್ತಿದೆ. ಆದರೆ ನಮ್ಮ ದೇಶವು ಈ ಸಂಕಷ್ಟವನ್ನು ದೊಡ್ಡ ವಿಪತ್ತಾಗಿ ಪರಿವರ್ತನೆಯಾಗಲು ಬಿಡುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.