ಬೆಂಗಳೂರು: ಕೊರೋನಾ ಲಾಕ್ಡೌನ್ ಸಂಕಷ್ಟದಿಂದ ಆಟೋ ಚಾಲಕರು, ಕ್ಷೌರಿಕರು, ಹೂ, ಹಣ್ಣು ಬೆಳೆಗಾರರು, ವ್ಯಾಪಾರಸ್ಥರು ಸೇರಿದಂತೆ ಇನ್ನೂ ಕೆಲವು ಅನೇಕ ಕ್ಷೇತ್ರದ ಜನರು ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 1610 ಕೋಟಿ ರೂ. ಗಳ ಪ್ಯಾಕೇಜ್ ಅನ್ನು ಆಯ್ದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಘೋಷಿಸಿದ್ದಾರೆ. ಈ ಮೂಲಕ ಅವರಿಗೆ ವಿಶೇಷ ನೆರವು ನೀಡಲು ಸರ್ಕಾರ ಮುಂದಾಗಿದೆ.
ಈ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸುದ್ದಿಗೋಷ್ಠಿ ನಡೆಸಿದ್ದು, ಪರಿಹಾರದ ಕುರಿತಂತೆ ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ ಕಾರಣದಿಂದ ಸಂತೋಷ ಸಮಾರಂಭಗಳು, ದೇವಾಲಯಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಇದರಿಂದಾಗಿ ಹೂ ಬೆಳೆಯುವವರು ಹಾಗೂ ಹೂ ಮಾರಿ ಜೀವನ ನಡೆಸುವವರು ತೊಂದರೆಗೀಡಾಗಿದ್ದಾರೆ. ಬೆಳೆದ ಬೆಳೆಯನ್ನು ಕೈಯ್ಯಾರೆ ನಾಶ ಮಾಡುವ ಸ್ಥಿತಿ ಏರ್ಪಟ್ಟಿದೆ. ಈ ಸಮಸ್ಯೆ ನಿವಾರಣೆಗೆ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 25,000 ರೂ. ಗಳಂತೆ ಪರಿಹಾರ ವಿತರಿಸುವ ಭರವಸೆ ನೀಡಿದ್ದಾರೆ. ಅದರಂತೆ ಹಣ್ಣು ತರಕಾರಿ ಬೆಳೆಗಾರರೂ ಬೆಳೆದ ಹಣ್ಣುಗಳಿಗೆ ಸರಿಯಾಗಿ ಮಾರುಕಟ್ಟೆ ಸಿಗದೆ ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಅವರಿಗೂ ಪರಿಹಾರ ಧನ ನೀಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.
ಕ್ಷೌರಿಕರಿಗೆ, ಅಗಸರಿಗೆ ನೆರವಾಗಲು 5000 ರೂ.(ಪ್ರತಿಯೊಬ್ಬರಿಗೆ), ಆಟೋ ರಿಕ್ಷಾ ಚಾಲಕರಿಗೆ 5000 ರೂ. (ಒಬ್ಬರಿಗೆ) ನೀಡುವ ಮೂಲಕ ನೆರವು ನೀಡಲಾಗುವುದು. ಅಲ್ಲದೆ ಸಣ್ಣ ಕೈಗಾರಿಕೆಗಳ, ಸಣ್ಣ, ಅತಿ ಸಣ್ಣ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜ್ ಅನ್ನು ಮುಂದಿನ ಎರಡು ತಿಂಗಳಿಗೆ ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಫಿಕ್ಸ್ಡ್ ಚಾರ್ಜ್ಗೆ ಎರಡು ತಿಂಗಳ ಹಿಂದೆ ಅವಧಿಗೆ ಬಡ್ಡಿ ಅಥವಾ ಯಾವುದೇ ದಂಡವಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಲ್ಲದೆ ನಿಗದಿತ ಸಮಯದೊಳಕ್ಕೆ ವಿದ್ಯುತ್ ಬಿಲ್ ಪಾವತಿಸುವವರಿಗೆ ಪ್ರೋತ್ಸಾಹ ಧನ, ವಿಳಂಬ ಪಾವತಿಗೆ ಕಡಿಮೆ ಬಡ್ಡಿ ವಿಧಿಸಲು ಸೂಚನೆ, ನೇಕಾರರ ಸಾಲಮನ್ನಾ ಯೋಜನೆಯ ಬಾಕಿ ಹಣದ ಶೀಘ್ರ ಬಿಡುಗಡೆ, ನೇಕಾರ್ ಸಮ್ಮಾನ್ ಯೋಜನೆಯಡಿಯಲ್ಲಿ ಪರಿಹಾರ ಧನ, 4 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ಪರಿಹಾರ ಧನ ಮೊದವಾದ ವಿಚಾರಗಳ ಬಗೆಗೂ ಈ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಜೊತಗೆ ಕೊರೋನಾ ಲಾಕ್ಡೌನ್ ನಿಯಮಗಳ ವಿನಾಯಿತಿಯಲ್ಲಿ ಜನರು ಸುರಕ್ಷತಾ ಕ್ರಮಗಳನ್ನು ಉಲ್ಲಂಘನೆ ಮಾಡದಂತೆಯೂ ಎಚ್ಚರಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.