ಶಿವಮೊಗ್ಗ: ಲಾಕ್ಡೌನ್ ನಿಂದಾಗಿ ದೇಶದ ಆರ್ಥಿಕ ವಹಿವಾಟು ಸ್ಥಗಿತವಾಗಿದೆ. ರಾಜ್ಯದಲ್ಲಿಯೂ ಇದೇ ಸ್ಥೀತಿ ಇದ್ದು, ರಾಜ್ಯದ ಅಡಿಕೆ ಬೆಳೆಗಾರರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಇದೀಗ ಸ್ಥಗಿತಗೊಂಡಿದ್ದ ಅಡಿಕೆ ವಹಿವಾಟನ್ನು ಮೇ 11 ರಿಂದ ಆರಂಭಿಸಲು ಉದ್ಯಮಿಗಳು, ಸಹಕಾರಿಗಳು ನಿರ್ಧರಿಸಿರುವುದಾಗಿ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಅಡಿಕೆ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವಹಿವಾಟುದಾರರಾದ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು, ವರ್ತಕರ ಸಂಘದ ಮುಖ್ಯಸ್ಥರು, ಖರೀದಿದಾರರ ಜೊತೆ ಮಾತುಕತೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.
ಈ ಚರ್ಚೆಯಲ್ಲಿ ಕ್ಯಾಂಪ್ಕೋ, ಅಡಿಕೆ ಖರೀದಿದಾರರು, ಮಾಮ್ಕೋಸ್ ಮೊದಲಾದ ಅನೇಕ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ, ಸೋಮವಾರದಿಂದ ತೊಡಗಿದಂತೆ ಮತ್ತೆ ಅಡಿಕೆ ವ್ಯಾಪಾರ ಪುನರಾರಂಭ ಮಾಡುವ ಬಗ್ಗೆ ನಿರ್ಧಾರಗಳನ್ನು ಕೈಗೊಂಡರು. ಅಡಿಕೆ ಧಾರಣೆ ಕುಸಿಯದಂತೆ ಹಾಗೂ ರೈತರಲ್ಲಿ ಮಾನಸಿಕ ಧೈರ್ಯ ತುಂಬುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿಯೂ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಜೊತೆಗೆ ಮನೆ ಬಾಗಿಲಿನಲ್ಲೇ ಬಂದು ಅಡಿಕೆ ಖರೀದಿಸುವವರ ಬಗ್ಗೆ ಎಚ್ಚರ ವಹಿಸುವಂತೆಯೂ ಸೂಚಿಸಿದರು. ಲಾಕ್ಡೌನ್ನಿಂದಾಗಿ ಬೆಳೆಗಾರರು ಅಡಿಕೆಯನ್ನು ಮನೆಯಲ್ಲೇ ದಾಸ್ತಾನಿಡುವಂತಾಗಿದೆ. ಆದರೆ ಅದನ್ನು ಶೀಘ್ರ ಖರೀದಿಗೆ ಅವಕಾಶ ನೀಡಲಾಗುವುದಾಗಿಯೂ ಅವರು ತಿಳಿಸಿದ್ದಾರೆ.
ಇನ್ನು ಉತ್ತರ ಭಾರತದಲ್ಲಿ ಗುಟ್ಕಾದಂತಹ ಪದಾರ್ಥಗಳ ತಯಾರಿಕಾ ಘಟಕಗಳಲ್ಲಿ ಅಡಿಕೆ ದಾಸ್ತಾನಿಲ್ಲ. ಆದ್ದರಿಂದ ಸ್ವಲ್ಪ ದಿನದಲ್ಲಿಯೇ ಅಂತಹ ಫ್ಯಾಕ್ಟರಿಗಳಿಂದ ಬೇಡಿಕೆ ಬರಲಿದ್ದು ಬೆಳೆಗಾರರು ಭಯ ಪಡುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಖರೀದಿ ಆರಂಭಿಸಲಾಗಿದೆ. ಮೇ 11 ರಿಂದ ಈ ಭಾಗದಲ್ಲೂ ಖರೀದಿ ಆರಂಭವಾಗಲಿದೆ. ರೈತರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮಾಮ್ಕೋಸ್ ಸಹ ಇನ್ನೇನು ಖರೀದಿ ಆರಂಭಿಸಲಿದೆ ಎಂದು ಮಾಮ್ಕೋಸ್ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.