ಬೆಂಗಳೂರು : ಕೊರೋನಾ ಲಾಕ್ಡೌನ್ನಿಂದಾಗಿ ದೇಶದ ಬಡ ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಾಜ್ಯದಲ್ಲಿಯೂ ಇದೇ ಪರಿಸ್ಥಿತಿ ಇದ್ದು ಜನರು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳಿಗೆ ಜನ ಸಾಮಾನ್ಯರೂ ಸಹ ತಮ್ಮ ಕೈಲಾದ ಮಟ್ಟಿಗೆ ಸಹಕಾರ ನೀಡುತ್ತಿದ್ದಾರೆ. ಕೆಲವರು ಆರ್ಥಿಕ ಸಹಾಯ ನೀಡಿದರೆ, ಇನ್ನು ಕೆಲವರು ವಸ್ತುಗಳ ರೂಪದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದಾರೆ.
ಉಡುಪಿಯ ತರಕಾರಿ ವ್ಯಾಪಾರಸ್ಥ ಬಸವರಾಜ ಅವರೂ ಸಹ ಈ ಸಂಕಷ್ಟದ ಸಂದರ್ಭದಲ್ಲಿ ಜನರ ಕಣ್ಣೀರೊರೆಸಲು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ದಿನಕ್ಕೆ ಸುಮಾರು 10 ರಿಂದ 12 ಕೆಜಿ ಗಳಷ್ಟು ತರಕಾರಿಯನ್ನು ನಿರಾಶ್ರಿತ, ನಿರ್ಗತಿಕರಿಗೆ, ಬಡವರಿಗೆ ಆಹಾರ ತಯಾರಿಸಿಕೊಡುವ ನಿಟ್ಟಿನಲ್ಲಿ ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಅಶಕ್ತರಿಗೆ ಆಹಾರ ಪೂರೈಕೆ ಮಾಡುವ ಸಂಘ ಸಂಸ್ಥೆಗಳಿಗೆ ಉಚಿತವಾಗಿ ತರಕಾರಿ ಒದಗಿಸುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದಾರೆ.
ರಾಣಿಬೆನ್ನೂರಿನವರಾದ ಬಸವರಾಜ್ ಕಳೆದ 25 ವರ್ಷಗಳಿಂದ ಉಡುಪಿಯ ಬೀಡಿನ ಗುಡ್ಡೆಯಲ್ಲಿ ವಾಸವಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಶಿವಮೊಗ್ಗದ ತರಕಾರಿ ಲಾರಿಗಳಿಂದ ತರಕಾರಿ ಖರೀದಿಸಿ ಬೀಡಿನ ಗುಡ್ಡದ ಜನರಿಗೆ ಮಾರಾಟ ಮಾಡುವ ಮೂಲಕ ಕುಟುಂಬ ನಡೆಸುತ್ತಿದ್ದಾರೆ. ತಮ್ಮ ಕನಿಷ್ಟ ಆದಾಯದಲ್ಲಿ ಈಗ ಅಶಕ್ತರ ಕಣ್ಣೀರು ಒರೆಸಲು ಹೊರಟಿರುವ ಬಸವರಾಜ ಅವರಿಗೆ ಹ್ಯಾಟ್ಸಾಪ್ ಹೇಳಲೇಬೇಕು.
ಇನ್ನು ಹುಕ್ಕೇರಿಯ ಗ್ರಾಮ ಪಂಚಾಯತ್ ಸದಸ್ಯ ಶ್ರೀನಿವಾಸ್ ಅವರು ಕೊರೋನಾ ಸಂಕಷ್ಟಕ್ಕೆ ಜನರಿಗೆ ಸಹಾಯ ಮಾಡಲು ತಮ್ಮ ಮನೆಯನ್ನೇ ಅಡವಿಟ್ಟಿದ್ದಾರೆ. ಆ ಮೂಲಕ ಸಾಲ ಪಡೆದ ಹಣದಲ್ಲಿ ತಮ್ಮ ಕ್ಷೇತ್ರದ ಜನರ ಅಶಕ್ತರಿಗೆ ಆಹಾರ, ದಿನಸಿ ವಸ್ತುಗಳನ್ನು ನೀಡಿದ್ದಾರೆ. ಇನ್ನು ಸುಮಾರು 1 ಲಕ್ಷ ರೂ. ಮೌಲ್ಯದ ದಿನಸಿ ವಸ್ತುಗಳನ್ನು ತಮ್ಮ ಸಂಗಡಿಗರ ಜೊತೆಗೂಡಿ ತಾವೇ ತಳ್ಳುಗಾಡಿಗಳ ಮೂಲಕ ಅಗತ್ಯವಿರುವವರ ಮನೆ ಮನೆಗೆ ತಲುಪಿಸುವ ಮೂಲಕ ಜನರಿಃದ ಮೆಚ್ಚುಗೆ ಗಳಿಸಿದ್ದಾರೆ. ಈ ಹಿಂದೆ ನೆರೆ ಹಾವಳಿಯ ಸಂದರ್ಭದಲ್ಲಿಯೂ ಸ್ವಂತ ಹಣ ಬಳಕೆ ಮಾಡಿ ಊರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿದ್ದ ಶ್ರೀನಿವಾಸ್ ಜನಸ್ನೇಹಿ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ.
ನಾವು ಬದುಕಿದರೆ ಸಾಕು. ಬೇರೆಯವರ ವಿಚಾರ ನಮಗೇಕೆ ಎಂಬವರ ಮಧ್ಯೆ, ನಮ್ಮಿಂದ ಸಮಾಜಕ್ಕೇನಾದರೂ ಒಳಿತಾಗಬೇಕು ಎಂದು ಬಯಸಿ, ಅದಕ್ಕಾಗಿ ಶ್ರಮಿಸುವ ಬಸವರಾಜ, ಶ್ರೀನಿವಾಸರಂತಹವರು ನಮ್ಮ ನಿಮ್ಮ ನಡುವೆ ಅದೆಷ್ಟೋ ಮಂದಿ ಇದ್ದಾರೆ. ಅಂತಹವರ ನಿಸ್ವಾರ್ಥ ಸೇವೆಯ ಕಾರಣದಿಂದಲೇ ಸಮಾಜದಲ್ಲಿ ಇನ್ನೂ ಮಾನವೀಯತೆ ಉಸಿರಾಡುತ್ತಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.