ಹೊಸಬಳ್ಳಾಪುರ: ಕೊರೋನಾ ಸಂಕಷ್ಟದಿಂದ ದೇಶದ ಬಡ ಜನರು ಒಂದು ಹೊತ್ತಿನ ಆಹಾರ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕೂ ಪರದಾಡುತ್ತಿದ್ದಾರೆ. ಇಲ್ಲದವರಿಗೆ ಅಯ್ಯೋ, ಇಲ್ಲವಲ್ಲಾ ಎಂಬ ಚಿಂತೆಯಾದರೆ, ಇರುವವರಿಗೆ ಮತ್ತೊಂದಷ್ಟನ್ನು ಕೂಡಿಡುವ ದಾಹ. ಇದು ನಮ್ಮ ಸಮಾಜದ ಕಥೆ. ಆದರೆ ಬಸವನ ಬೆಟ್ಟದ ಸಮೀಪದ ಸೂಲಿಗೆರೆಯ ವನವಾಸಿ ಬಡ ಕುಟುಂಬಗಳು ಮಾತ್ರ ಇದಕ್ಕಿಂತ ಭಿನ್ನ. ತಮ್ಮ ಜೊತೆಗೆ ತಮ್ಮ ಸುತ್ತಮುತ್ತಲಿನ ನಿವಾಸಿಗಳಿಗೂ ಅಗತ್ಯ ವಸ್ತುಗಳು ದಕ್ಕಬೇಕು ಎನ್ನುವ ಈ ಮಂದಿಯ ಬದುಕು ‘ಅವನಿಗೇನಾದರೆ ನನಗೇನು, ನಾನು ಮಾತ್ರ ನೆಮ್ಮದಿಯಲ್ಲಿರಬೇಕು’ ಎಂದು ಬಯಸುವ ಎಲ್ಲರಿಗೂ ಪಾಠವೇ ಸರಿ.
ಹೊಸಬಳ್ಳಾಪುರದ ಸೂಲಿಗೆರೆಯ ಅರಣ್ಯ ಪ್ರದೇಶದಲ್ಲಿನ 6 ಜನರಿದ್ದ ಬಡ ಕುಟುಂಬವೊಂದಕ್ಕೆ ದಿನಸಿ ವಿತರಿಸಲು RSS ಕಾರ್ಯಕರ್ತರು ತೆರಳಿದಾಗ, ಅ ಮನೆಯವರು ತಮ್ಮ ಮನೆಯಲ್ಲಿ ಸದ್ಯ ಇಬ್ಬರೇ ವಾಸ ಮಾಡುತ್ತಿದ್ದೇವೆ. ಉಳಿದವರು ಬೇರೆ ಬೇರೆ ಕಾರಣಗಳಿಂದ ಬೇರೆಡೆ ಉಳಿದುಕೊಳ್ಳುವಂತಾಗಿದೆ ಎಂದು ಪ್ರಾಮಾಣಿಕತೆಯಿಂದ ಉತ್ತರ ನೀಡಿದ್ದಾರೆ. ಜೊತೆಗೆ ಈ ಅರಣ್ಯ ಪ್ರದೇಶದಲ್ಲಿ ಮತ್ತೊಂದಷ್ಟು ಬಡ ವರ್ಗದ ಜನರು ಹೊಟ್ಟೆಗೆ ಕೂಳಿಲ್ಲದೆ ಸಂಕಟ ಅನುಭವಿಸುತ್ತಿದ್ದು, ಅವರಿಗೆ ಸಹ ಸಹಾಯ ಮಾಡುವಂತೆ ಕೋರಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅದೇ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ವಿಧವೆ, ವೃದ್ಧೆ, ವಯಸ್ಸಾದ ಗಂಡ ಹೆಂಡತಿ ಮೊದಲಾದ ಕುಟುಂಬಗಳು ಆಹಾರಕ್ಕಾಗಿ ಪರದಾಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ಆ ಮನೆಯಾಕೆ ಕಾರ್ಯಕರ್ತರಿಗೆ ನೀಡುತ್ತಾಳೆ. ಜೊತೆಗೆ ಅಶಕ್ತರ ಕಷ್ಟಕ್ಕೂ ನೆರವಾಗಲು ಮನವಿ ಮಾಡುತ್ತಾಳೆ. ನಾಡಿನ ಜೊತೆಗೆ ಸಂಪರ್ಕವೇ ಕಡಿದು ಹೋಗಿರುವ ಸಂದರ್ಭದಲ್ಲಿ ತನಗೆ ಆಹಾರ ಸಿಕ್ಕರೆ ಸಾಕು ಇನ್ನೊಬ್ಬರ ಚಿಂತೆ ನನಗೇಕೆ ಎಂದು ಯೋಚಿಸದೆ, ನನ್ನಂತೆಯೇ ಅವರೂ, ಕಷ್ಟಕ್ಕೆ ನೆರವಾಗುವುದು ಮಾನವ ಧರ್ಮ ಎಂದು ಯೋಚಿಸಿದ ಆ ಕುಟುಂಬ ನಿಜಕ್ಕೂ ಸಮಾಜಕ್ಕೆ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.