ಚಿಕ್ಕಮಗಳೂರು: ಕೊರೋನಾ ಸೋಂಕು ಹರಡುತ್ತೆ. ಧಯಮಾಡಿ ಮನೇಲೇ ಇರಿ ಎಂದು ಪೊಲೀಸರು ಜನರಲ್ಲಿ ಪರಿ ಪರಿಯಾಗಿ ಕೇಳಿಕೊಂಡರೂ, ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ರಾಜಾರೋಷವಾಗಿ ಬೀದಿಗಿಳಿಯುವ ಸಾಹಸವನ್ನು ಕೆಲವು ಜನರು ಮಾಡುತ್ತಲೇ ಇರುತ್ತಾರೆ. ಹೊರಬರಬೇಡಿ ಎಂದರೆ ಕೇಳದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯ ಬಾಳೆಹೊನ್ನೂರಿನ ಪೊಲೀಸರು ಹೊಸ ಪ್ರಯತ್ನವೊಂದರ ಮೂಲಕ ಜನರಲ್ಲಿ ಅರಿವು ಮೂಡಿಸಲು ಹೊರಟಿದ್ದಾರೆ. ಬೀದಿ ನಾಟಕಗಳ ಮೂಲಕ ಕೊರೋನಾ ದ ಕರಾಳತೆಯನ್ನು ಜನರಿಗೆ ತಿಳಿಸುವ ಮೂಲಕ, ಅವರಲ್ಲಿ ಎಚ್ಚರ ಮೂಡಿಸುವ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.
ಮಾಡಲು ಕೊರೋನಾ ಸಂಹಾರ, ಪಾಲಿಸಿ ಸಾಮಾಜಿಕ ಅಂತರ ಎಂಬ ಶಿರ್ಷಿಕೆಯ ಅಡಿಯಲ್ಲಿ ಕೊರೋನಾದಿಂದ ಆಗುತ್ತಿರುವ ಅಪಾಯಗಳು ಮತ್ತು ಅವುಗಳಿಂದ ತಪ್ಪಿಸಿಕೊಳ್ಳಲು ಇರುವ ಉಪಾಯಗಳ ಬಗ್ಗೆ ಪೊಲೀಸರೇ ಬೀದಿ ನಾಟಕಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ಸಾಮ, ದಾನ, ಬೇಧ, ದಂಡಕ್ಕೆ ಬಗ್ಗದ ಜನರನ್ನು ನಾಟಕದ ಮೂಲಕ ಎಚ್ಚೆತ್ತುಕೊಳ್ಳುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ನಗರದ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೀದಿ ನಾಟಕದ ಮೂಲಕ ಜನರಿಗೆ ಕೊರೋನಾ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗೆಗೂ ಅರಿವು ಮೂಡಿಸಿದ್ದಾರೆ. ಇನ್ನು ಯಕ್ಷಗಾನದ ರೀತಿ ವೇಷ ಧರಿಸಿ ಪೊಲೀಸರು ಮಾಡಿದ ಈ ಮಾದರಿ ಕೆಲಸಕ್ಕೆ ನಾಗರಿಕರೂ ಭೇಷ್ ಅಂದಿದ್ದಾರೆ.
ಕೊರೋನಾ ಸೋಂಕಿನಿಂದ ಜನರನ್ನು ರಕ್ಷಿಸುವ ಸಲುವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ನಿಯಂತ್ರಣ ನಿಯಮಗಳನ್ನು ಜಾರಿಗೆ ತಂದಿದ್ದರೂ, ಅವುಗಳಿಗೆ ಕ್ಯಾರೇ ಎನ್ನದ ಜನರಿಗೆ ಪೊಲೀಸರು ತಮ್ಮ ವಿಭಿನ್ನ ಪ್ರಯತ್ನದ ಮೂಲಕ ಜಾಗೃತಿ ಮೂಡಿಸಲು ಹೊರಟಿರುವುದೂ ನಿಜಕ್ಕೂ ಶ್ಲಾಘನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.