ಬೆಂಗಳೂರು : ಪಂಚಾಯತ್ ರಾಜ್ ದಿನವಾದ ಇಂದು ಪಂಚಾಯತ್ ಪುರಸ್ಕಾರ್ 2020 ರ ಸಾಲಿನ ಪ್ರಗತಿ ಆಧರಿಸಿ ನೀಡಲಾಗುವ ವಿವಿಧ ಪುರಸ್ಕಾರಗಳು ದೇಶದಾದ್ಯಂತದ ಆಯ್ದ ಗ್ರಾಮ ಪಂಚಾಯತ್ಗಳಿಗೆ ಇಂದು ಲಭಿಸಿದೆ. ಕರ್ನಾಟಕದ ಮೂರು ಗ್ರಾಮ ಪಂಚಾಯತಿಗಳಿಗೆ ವಿವಿಧ ಪ್ರಶಸ್ತಿಗೆ ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಗೆ ಗ್ರಾಮ ಪಂಚಾಯತ್ ಮತ್ತು ರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯತ್ ಭಾಜನವಾಗಿದೆ.
ಕರ್ನಾಟಕದ ಮೂರು ಗ್ರಾಮ ಪಂಚಾಯತಿಗಳಲ್ಲಿ ಸುಳ್ಯ ತಾಲೂಕಿನ 28 ಗ್ರಾಮ ಪಂಚಾಯತಿಗಳ ಪೈಕಿ ನಾನಾಜೀ ದೇಶ್ ಮುಖ್ ರಾಷ್ಟ್ರೀಯ ಗ್ರಾಮ ಸಭೆ ಪುರಸ್ಕಾರಕ್ಕೆ ಕನಕಮಜಲು ಗ್ರಾ.ಪಂ. ಆಯ್ಕೆಯಾಗಿದೆ. ಈ ಪುರಸ್ಕಾರಕ್ಕೆ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಗ್ರಾ.ಪಂ., ಮಂಗಳೂರು ತಾಲೂಕಿನ ಮಣ್ಣಬೆಟ್ಟು ಗ್ರಾ.ಪಂ.ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳೂರು ಗ್ರಾ.ಪಂ. ಈ ಹಿಂದೆ ಆಯ್ಕೆಯಾಗಿತ್ತು. ಈ ಕುರಿತು ರಾಷ್ಟ್ರ ಮಟ್ಟದ ಕ್ಷೇತ್ರ ತಪಾಸಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ನಿರ್ದೇಶಕರುಗಳು ಕನಕಮಜಲು ಗ್ರಾ.ಪಂ.ಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಿ ತಪಾಸಣೆ ನಡೆಸಿದ್ದರು.
ಇದೀಗ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ಈ ಪುರಸ್ಕಾರ ಲಭಿಸಿದೆ. ದೇಶದಾದ್ಯಂತ ಗ್ರಾಮ ಸಭೆಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡ ಒಟ್ಟು 20 ಗ್ರಾ. ಪಂ.ಗಳಿಗೆ ನಾನಾಜೀ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಈ ಮೂಲಕ ಗ್ರಾಮ ಸಭೆಗಳ ಮಹತ್ವವನ್ನು ಸಾಮಾನ್ಯ ನಾಗರೀಕರಿಗೆ ತಿಳಿಸುವುದರೊಂದಿಗೆ ಗ್ರಾಮ ಸಭೆಗಳಿಂದಾಗುವ ಅನುದಾನ, ಕಾರ್ಯಗಳು ಹಾಗೂ ಅಧಿಕಾರಿಗಳ ಪಾತ್ರವನ್ನು ಅರಿಯುವುದರೊಂದಿಗೆ ಕಾರ್ಯವೈಖರಿಯನ್ನು ಗುರುತಿಸಬಹುದಾಗಿದೆ. ಈ ಪ್ರಶಸ್ತಿಯು ರೂ. 10 ಲಕ್ಷಗಳ ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ಅಲ್ಲದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಗೆ ಅತ್ಯುತ್ತಮ ಮಕ್ಕಳ ಸ್ನೇಹಿ ಗ್ರಾಮಪಂಚಾಯತ್ ಪುರಸ್ಕಾರ ಲಭಿಸಿದೆ. ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯ್ತಿಗೆ ನಮ್ಮ ಗ್ರಾಮ – ನಮ್ಮ ಯೋಜನೆ ಪುರಸ್ಕಾರ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.