ಬೆಂಗಳೂರು: ಕೊರೋನಾ ಮಹಾಮಾರಿಯ ಕಪಿಮುಷ್ಟಿಗೆ ಸಿಲುಕಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ದೇಶದ ಸಾಮಾನ್ಯ ಜನರು ಮಾಡಲು ಕೆಲಸವಿಲ್ಲದೆ, ಆಹಾರ ವಸ್ತುಗಳನ್ನು ಸಂಗ್ರಹಿಸಲು ಬೇಕಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನು ರೈತರ ವಿಚಾರಕ್ಕೆ ಬಂದರೆ ಬೆಳೆದ ಉತ್ಪನ್ನವನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾನೆ. ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಆದರೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಬಸವನಗುಡಿಯ ಬೆಳ್ಳುಳ್ಳಿ ಮಾದೇಶ ಎಂಬ ರೈತ ತಾನು ಬೆಳೆದ ಲಕ್ಷಾಂತರ ರೂ. ಮೌಲ್ಯದ ತರಕಾರಿಗಳನ್ನು ಬಡ ಜನರಿಗೆ ಹಂಚುವ ಮೂಲಕ ಮಾದರಿಯಾಗಿದ್ದಾನೆ.
ಕೊರೋನಾದಿಂದ ಬೆಳೆದ ಬೆಳೆಯನ್ನು ಕೊಳ್ಳುವ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆ ನಾಶಕ್ಕೆ ಅನೇಕ ಜನ ರೈತರು ಮುಂದಾಗಿದ್ದಾರೆ. ಆದರೆ ಇವರೆಲ್ಲರ ನಡುವೆ ಮಾದೇಶ ಅವರ ಈ ಕಾರ್ಯ ಇತರರಿಗೆ ಮಾದರಿಯಾಗುವಂತಿದೆ. ತಮ್ಮ ಐದು ಎಕ್ರೆ ಜಮೀನಿನಲ್ಲಿ ಬೆಳೆದ ತರಕಾರಿ, ಕಾಯಿಪಲ್ಲೆ ಗಳನ್ನು ಲಾಕ್ಡೌನ್ ನಿಂದಾಗಿ ತೊಂದರೆಗೆ ಸಿಲುಕಿರುವ ಕುಟುಂಬಗಳಿಗೆ ಉಚಿತವಾಗಿ ನೀಡುವ ಮೂಲಕ ಮಾದೇಶ ಅವರು ಡೊಡ್ಡತನ ಮೆರೆದಿದ್ದಾರೆ. ಜೊತೆಗೆ ಇತರ ರೈತರಿಂದ ಟೊಮೆಟೊ, ಬೆಳ್ಳುಳ್ಳಿ, ಈರುಳ್ಳಿ ಮೊದಲಾದವುಗಳನ್ನು ಖರೀದಿಸಿ ಜನರಿಗೆ ಹಂಚುವ ಮೂಲಕ ರೈತ ನಿಜವಾದ ದೇಶದ ಬೆನ್ನೆಲುಬು ಎಂಬುದನ್ನು ಈ ತುರ್ತು ಪರಿಸ್ಥಿತಿಯಲ್ಲಿ ಸಾಬೀತು ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಪ್ರತಿ ನಿತ್ಯ ತಮ್ಮ ಆರೋಗ್ಯ, ತಮ್ಮ ಕುಟುಂಬದ ಆರೋಗ್ಯವನ್ನು ಲೆಕ್ಕಿಸದೆ ಕರ್ತವ್ಯ ಮಾಡುತ್ತಿರುವ ಪೊಲೀಸ್ ವರ್ಗಕ್ಕೂ ತರಕಾರಿಗಳನ್ನು ನೀಡುವ ಮೂಲಕ, ಅವರ ಸ್ವಾರ್ಥ ರಹಿತ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೋವಿಡ್ನಿಂದಾಗಿ ಪರಿಸ್ಥಿತಿ ಕೆಟ್ಟಿದೆ. ಇಂತಹ ಸಂದರ್ಭದಲ್ಲಿ ಸಮಯೋಚಿತ ನಿರ್ಧಾರದ ಮೂಲಕ ಬೆಳೆದ ಬೆಳೆಯನ್ನು ಬಡ ಕುಟುಂಬಗಳಿಗೆ ನೀಡಿದ ಮಾದೇಶ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.