ಬೆಂಗಳೂರು: ಕೊರೋನಾ ಸೋಂಕು ವ್ಯಾಪಿಸದಂತೆ ಲಾಕ್ಡೌನ್ ನಿಯಮ ಜಾರಿಯಲ್ಲಿದೆ. ಈ ಕಾರಣದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಲ್ಪಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮುಂದೇನು ಎಂದು ಆತಂಕಕ್ಕೊಳಗಾಗಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಮಾಡಲು ಎಪ್ರಿಲ್ 29 ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯ ಮದ್ಯಾಹ್ನ 3 ಗಂಟೆಯಿಂದ 4.30 ರ ವರೆಗೆ ತರಗತಿಗಳು ನಡೆಯಲಿದ್ದು, ನುರಿತ ಶಿಕ್ಷಕರು ವಿಷಯವಾರು ಬೋಧನೆ ಮಾಡಲಿದ್ದಾರೆ. ಆರಂಭದ 16 ದಿನಗಳು 45 ನಿಮಿಷಗಳಂತೆ ಎರಡು ಅವಧಿಗಳಲ್ಲಿ ಗಣಿತ ಮತ್ತು ವಿಜ್ಞಾನ, 17 ನೇಯ ದಿನ ಈ ಎರಡೂ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಗಳನ್ನು ಬರೆಯುವ ಬಗೆಯ ಬಗ್ಗೆ ನುರಿತ ಶಿಕ್ಷಕರು ತಿಳಿಸಿ ಕೊಡಲಿದ್ದಾರೆ. 18 ನೇ ದಿನದಿಂದ 6 ದಿನಗಳ ಕಾಲ ಸಮಾಜ ವಿಜ್ಞಾನ, ನಂತರದ ದಿನಗಳಲ್ಲಿ ಕನ್ನಡ, ಇಂಗ್ಲಿಷ್ ತರಗತಿಗಳು ನಡೆಯಲಿದೆ. ಪ್ರತಿ ವಿಷಯಗಳ ತರಗತಿಯ ಕೊನೆಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ತಿಳಿಸಲಾಗುವುದು. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಚಿವರು ತಿಳಿಸಿದ್ದಾರೆ.
ಈ ಮಾಹಿತಿ ಕುರಿತು ಫೇಸ್ಬುಕ್ನಲ್ಲಿ ತಿಳಿಸಿರುವ ಸಚಿವರು, ʼವಿದ್ಯಾರ್ಥಿ ಮಿತ್ರರು ಈ ಮಹತ್ವದ ತರಗತಿಗಳನ್ನು ತಪ್ಪದೇ ವೀಕ್ಷಿಸಿ ಮುಂಬರುವ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರೆಂಬ ವಿಶ್ವಾಸ ನನ್ನದುʼ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.