ಬೆಂಗಳೂರು: ವಿಶ್ವವನ್ನೇ ಕೊರೋನಾ ವೈರಸ್ ಎಂಬ ಕಣ್ಣಿಗೆ ಕಾಣದ ಮಹಾಮಾರಿ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದೆ. ಭಾರತದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕರ್ನಾಟಕದಲ್ಲಿಯೂ ಕೊರೋನಾ ಕಾರುಬಾರು ಜೋರಾಗಿಯೇ ಇದೆ. ಈ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಲಾಕ್ಡೌನ್ ಕ್ರಮವನ್ನೂ ಅನುಸರಿಸಲಾಗಿದೆ.
ಕೊರೋನಾ ಸೋಂಕಿತರ, ಶಂಕಿತರ ಸೇವೆಯಲ್ಲಿ ವೈದ್ಯಕೀಯ ಸಿಬ್ಬಂದಿ ತೊಡಗಿಸಿಕೊಂಡಿದ್ದರೆ, ಜನರು ರಸ್ತೆಗಿಳಿಯದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ರಸ್ತೆ ರಸ್ತೆಗಳಲ್ಲಿ ತಮ್ಮ ಆರೋಗ್ಯ, ಕುಟುಂಬ, ಜೀವವನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯ ಪೊಲೀಸ್ ಸ್ಟೇಷನ್ ಬಳಿ ಕರ್ತವ್ಯ ನಿರತ ಪೊಲೀಸರಿಗೆ ಮಜ್ಜಿಗೆ ಪ್ಯಾಕೆಟ್ಗಳನ್ನು ನೀಡುವ ಮೂಲಕ ಪೊಲೀಸರ ಸೇವೆಗೆ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಛೇರಿಯಲ್ಲಿ ಸೀನಿಯರ್ ಅಕೌಂಟೆಂಟ್ ಆಗಿರುವ ಉಮಾ ರಾಮಸ್ವಾಮಿ ಮಾಡುತ್ತಿದ್ದಾರೆ. ಪ್ರತಿನಿತ್ಯ ಕೊರೋನಾ ಹೋರಾಟದಲ್ಲೇ ತೊಡಗಿಸಿಕೊಂಡಿರುವ ಪೊಲೀಸರಿಗೆ ತಾವು ಕರ್ತವ್ಯಕ್ಕೆ ತೆರಳುವಾಗ ಮಜ್ಜಿಗೆ ಹಂಚಿ ಹೋಗುವ ಮೂಲಕ ಇತರರಿಗೂ ಪ್ರೇರಣೆ ನೀಡುತ್ತಿದ್ದಾರೆ.
ಇವರ ಈ ಕಾರ್ಯವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶ್ಲಾಘಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸುರೇಶ್ ಕುಮಾರ್ ಅವರು, ʼಈ ರೀತಿ ಯಾರ ಕಣ್ಣಿಗೂ ಬೀಳದೆ, ಯಾವ ಪ್ರಚಾರಕ್ಕೂ ಹಂಬಲಿಸಿದೆ, ತಮ್ಮ ಮನದಾಳದ ಬಯಕೆಯಂತೆ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಜನರ ಪ್ರತಿನಿಧಿ ಶ್ರೀಮತಿ ಉಮಾ ರಾಮಸ್ವಾಮಿಯವರಿಗೆ ಧನ್ಯವಾದಗಳುʼ ಎಂದಿದ್ದಾರೆ.
ಈ ರೀತಿ ಯಾರ ಕಣ್ಣಿಗೂ ಬೀಳದೇ, ಯಾವ ಪ್ರಚಾರಕ್ಕೂ ಹಂಬಲಿಸಿದೇ, ತಮ್ಮ ಮನದಾಳದ ಬಯಕೆಯಂತೆ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಜನರ ಪ್ರತಿನಿಧಿ ಶ್ರೀಮತಿ ಉಮಾ ರಾಮಸ್ವಾಮಿಯವರಿಗೆ ಧನ್ಯವಾದಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.