ಹುಬ್ಬಳ್ಳಿ : ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಮಹಾಮಾರಿ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಭಾರತದಲ್ಲಿನ ನಿರಾಶ್ರಿತ ಟಿಬೇಟಿಯನ್ ಸಮುದಾಯ ಮನಬಿಚ್ಚಿ ಕೈ ಜೋಡಿಸಿದೆ. ಹೆಗಲಿಗೆ ಹಗಲು ಕೊಟ್ಟು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಮುಖ್ಯವಾಗಿ ಕರ್ನಾಟಕದಲ್ಲಿನ 5 ನಿರಾಶ್ರಿತರ ಪುನರವಸತಿ ಕೇಂದ್ರಗಳಲ್ಲಿ ಬೌದ್ಧ ಮಠಗಳು ಹಾಗೂ ಟಿಬೇಟಿಯನ್ ನಾಗರಿಕರು ಒಟ್ಟುಗೂಡಿ ಸುಮಾರು 2 ಕೋಟಿ ರೂಪಾಯಿಯಷ್ಟು ಹಣವನ್ನು ಪಿ.ಎಂ. ಕೇರ್ ನಿಧಿಗೆ ಹಾಗೂ ಸಿ.ಎಂ. ಪರಿಹಾರ ನಿಧಿಗೆ ಸಂಗ್ರಹಿಸಿ ನೀಡಿವೆ.
ಅಲ್ಲದೇ ಈ ಪುನರ್ವಸತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಬಡವ ಹಾಗೂ ದಿನಕೂಲಿಗಳ ಸಹಾಯಾರ್ಥವಾಗಿ ಸಾವಿರಾರು ಕುಟುಂಬಗಳಿಗೆ ಪಡಿತರ ವಸ್ತುಗಳು, ಮಾಸ್ಕ್ ಇತ್ಯಾದಿಗಳನ್ನು ಹಂಚಲಾಗಿದೆ. ನೂರಾರು ಸಂನ್ಯಾಸಿಗಳು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ಸರಕಾರದ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ಪಕ್ಕದ ಗ್ರಾಮ ಪಟ್ಟಣಗಳಲ್ಲಿ ಔಷಧಿ ಸಿಂಪಡಣೆ, ಸ್ವಚ್ಛತಾ ಅಭಿಯಾನ ಮುಂತಾದವುಗಳಲ್ಲೂ ಕೂಡ ಸಮುದಾಯದ ಯುವಕರು ತೊಡಗಿಕೊಂಡಿದ್ದಾರೆ.
“ಲಾಕ್ಡೌನ್ ಪರಿಣಾಮವಾಗಿ, ಅನೇಕ ಜನರು, ವಿಶೇಷವಾಗಿ ತಮ್ಮ ದೈನಂದಿನ ದುಡಿಮೆಯ ಮೇಲೆ ಅವಲಂಬಿಸಿರುವವರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ಕೋವಿಡ್ -19 ತುರ್ತುನ್ನು ಎದುರಿಸಲು ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಅವಿರತ ಪ್ರಯತ್ನಗಳನ್ನು ಬೆಂಬಲಿಸಲು, ಈ ಕಷ್ಟದ ಸಮಯದಲ್ಲಿ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ನಾವು ನಂಬುತ್ತೇವೆ, ”ಎಂದು ಟಿಬೇಟ್ ಸರಕಾರದ ದಕ್ಷಿಣ ಭಾರತದ ಮುಖ್ಯ ಪ್ರತಿನಿಧಿ ಚೋಪೆಲ್ ಥುಪ್ಟನ್ ಈ ಕುರಿತು ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಬೈಲುಕುಪ್ಪೆಯಲ್ಲಿ ಎರಡು ಕ್ಯಾಂಪ್ ಹಾಗೂ ಹುಣಸೂರು, ಕೊಳ್ಳೆಗಾಲ, ಮುಂಡಗೋಡ ಕ್ಯಾಂಪಿನಲ್ಲಿ ವಾಸಿಸುವ ಟಿಬೆಟಿಯನ್ ಸಮುದಾಯ, ಜೊತೆಗೆ ಬೆಂಗಳೂರಿನಲ್ಲಿ ವಾಸಿಸುವ ಟಿಬೆಟಿಯನ್ನರು ಒಟ್ಟಾರೆಯಾಗಿ ಒಟ್ಟು ರೂ. 203,65,228.00 ಯನ್ನು ಪಿಎಂ ಕೇರ್ಸ್ ಮತ್ತು ಕರ್ನಾಟಕ ಸಿಎಂ ರಿಲೀಫ್ ಫಂಡ್ ಮತ್ತು ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.
COVID-19 ಹರಡುವಿಕೆಯ ವಿರುದ್ಧ ಹೋರಾಡಲು ಮತ್ತು ಬಡವರಿಗೆ ನೆರವಾಗಲು ಭಾರತ ಸರಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಬೆಂಬಲಿಸಲು ದೇಶದಾದ್ಯಂತದ ಟಿಬೆಟಿಯನ್ನರು ಸಹ ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ, ಟಿಬೇಟ್ ಸರಕಾರದ ಎಲ್ಲ ಸ್ಥರದ ಸಿಬ್ಬಂದಿಗಳು ತಮ್ಮ ಒಂದು ದಿನದ ಸಂಬಳವನ್ನು PM CARES ನಿಧಿಗೆ ದೇಣಿಗೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು.
ಜೊತೆಯಲ್ಲಿನ ಈ ನಿರಾಶ್ರಿತ ಕ್ಯಾಂಪ್ಗಳಲ್ಲಿ ಲಾಕ್ಡೌನ್, ಕ್ವಾರೆಂಟೈನ್ ವ್ಯವಸ್ಥೆ ಹಾಗೂ ಪರಿಹಾರ ಕಾರ್ಯಗಳು ಅತ್ಯಂತ ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಲಾಗಿದ್ದು, ಇತರರಿಗೆ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.