ಬೆಂಗಳೂರು: ಕೋವಿಡ್-19 ಸಂಕಟಕ್ಕೆ ಜಗತ್ತು ಸಂಕಷ್ಟ ಅನುಭವಿಸುತ್ತಿದೆ. ಸೋಂಕು ಹರಡದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಣೋಪಾಯಗಳ ಮೂಲಕ ಕಾರ್ಯ ಪ್ರವೃತ್ತವಾಗಿದ್ದರೂ ಸೋಂಕನ್ನು ಬುಡ ಸಮೇತ ಕಿತ್ತು ಹಾಕುವುದು ಹೇಗೆ ಎನ್ನುವುದಕ್ಕೆ ಮಾತ್ರ ಅದೆಷ್ಟು ಪ್ರಯತ್ನ ನಡೆಸಿದರೂ ಮಾರ್ಗ ಗೋಚರಿಸಿಲ್ಲ. ಆದರೆ ಸೋಂಕು ಹೆಚ್ಚು ವ್ಯಾಪಿಸದಂತೆ ತಡೆಯಲು ರಾಜ್ಯ ಸರ್ಕಾರ ಮಾತ್ರ ಈಗ ಮಾದರಿ ಕ್ರಮಕ್ಕೆ ಮುಂದಾಗಿದ್ದು, ಕೆಎಸ್ಆರ್ಟಿಸಿಯ ಹಳೆಯ ಬಸ್ ಅನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತನೆ ಮಾಡುವ ಮೂಲಕ ಸೋಂಕು ನಿಯಂತ್ರಿಸಲು ಮುಂದಾಗಿದೆ.
ರಾಜ್ಯದ ಸಾರಿಗೆ ಸಚಿವರ ಮುಂದಾಲೋಚನೆಯ ಪರಿಣಾಮವಾಗಿ ಹಳೆಯ, ಉಪಯೋಗಕ್ಕೆ ಬಾರದ ಬಸ್ ಅನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಲಾಗಿದೆ. ಈ ಸ್ಯಾನಿಟೈಸರ್ ಬಸ್ಗೆ “ಸಾರಿಗೆ ಸಂಜೀವಿನಿ” ಎಂದು ನಾಮಕರಣ ಮಾಡಲಾಗಿದ್ದು, ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಇವುಗಳನ್ನು ಸಿದ್ಧ ಮಾಡಲಾಗಿದೆ. ನಗರದಲ್ಲಿ ತುರ್ತು ಸೇವೆ ನೀಡುತ್ತಿರುವವರಿಗೆ ಈ ಸಂಚಾರಿ ಸಂಜೀವಿನಿ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರುವುದಾಗಿ ಸವದಿ ಮಾಹಿತಿ ನೀಡಿದ್ದಾರೆ. ಜನಸಂದಣಿ ಇರುವ ಪ್ರದೇಶ, ಬಸ್ ನಿಲ್ದಾಣ, ಮಾರುಕಟ್ಟೆ ಮೊದಲಾದ ಕಡೆಗಳಲ್ಲಿಯೂ ಇಂತಹ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇನ್ನು ಈ ಬಸ್ಗಳಿಗೆ ಸ್ಯಾನಿಟೈಸರ್ ಪೈಪ್ಗಳ ಕನೆಕ್ಷನ್ ನೀಡಲಾಗಿದ್ದು, ಈ ಬಸ್ಗೆ ಜನರು ಹತ್ತಿ ಇಳಿಯುವ ಸಂದರ್ಭದಲ್ಲಿ ಅಳವಡಿಸಿದ ಸ್ಯಾನಿಟೈಸರ್ ದ್ರಾವಣಗಳು ಮೈಗೆ ಸಿಂಪಡಣೆಯಾಗುತ್ತದೆ. ಆ ಮೂಲಕ ದೇಹದಲ್ಲಿದ್ದ ವೈರಾಣುಗಳು ಸ್ಯಾನಿಟೈಸರ್ಗಳ ಸಂಪರ್ಕಕ್ಕೆ ಬಂದು ಸೋಂಕು ಹರಡುವುದನ್ನು ತಡೆಯುತ್ತವೆ. ಆ ಮೂಲಕ ಸೋಂಕಿನಿಂದ ಮುಕ್ತರಾಗಲು ಸಹಾಯ ಮಾಡುತ್ತವೆ.
ಬಳಕೆಗೆ ಬಾರದ ಬಸ್ಗಳನ್ನು ಸಾರಿಗೆ ಸಂಜೀವಿನಿಗಳಾಗಿಸುವ ಮೂಲಕ ಕರ್ನಾಟಕ ಸರ್ಕಾರ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.