ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶವೇ ತತ್ತರಿಸಿಹೋಗಿದೆ. ಮಹಾ ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸಿಕೊಳ್ಳುವ ಸಲುವಾಗಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಆದರೆ ಇದರ ಪರಿಣಾಮವಾಗಿ ಬಡವರು ಮತ್ತು ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಜನರ ಸಂಕಷ್ಟವನ್ನು ಪರಿಹರಿಸಲು ಹಲವಾರು ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಮುಂದಾಗಿವೆ. ಅದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಒಂದು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮಂಡ್ಯ ಜಿಲ್ಲೆಯಲ್ಲಿ ಸಂಕಷ್ಟದಲ್ಲಿದ್ದ ತಮಿಳುನಾಡು ಮೂಲದ ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಮಾನವೀಯತೆಯನ್ನು ತೋರಿಸಿದ್ದಾರೆ.
ತಮಿಳುನಾಡಿನ ಧರ್ಮಾವರಂನಿಂದ ಕುಟುಂಬ ಸಮೇತರಾಗಿ ಮಂಡ್ಯಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಲಾಕ್ ಡೌನ್ ಘೋಷಣೆ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರೊಬ್ಬರು ತಮ್ಮ ಮತ್ತು ತಮ್ಮ ಸಹವರ್ತಿಗಳ ಸಂಕಷ್ಟವನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಇದನ್ನು ನೋಡಿದ ಆರ್ಎಸ್ಎಸ್ ಅವರುಗಳ ನೆರವಿಗೆ ಧಾವಿಸಿದೆ.
ಇವರಿದ್ದ ಸ್ಥಳಕ್ಕೆ ಆಗಮಿಸಿದ ಸ್ವಯಂಸೇವಕರು ಮಳವಳ್ಳಿ ತಾಲೂಕಿನ ಮಿಕ್ಕೆರೆಯಲ್ಲಿ ಇವರಿಗೆ ಆಶ್ರಯವನ್ನು ಕಲ್ಪಿಸಿದ್ದಾರೆ. ನಿತ್ಯ ಆಹಾರವನ್ನು ಇವರಿಗೆ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ.
ಆದರೆ ಸುಮ್ಮನೆ ತಿನ್ನಲು ಮನಸಾಗದೆ ವಲಸೆ ಕಾರ್ಮಿಕರು ತಮಗೆ ಕೆಲಸವನ್ನು ನೀಡುವಂತೆ ಸ್ವಯಂಸೇವಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದರಂತೆ ಅವರಿಗೆ ಕಬ್ಬಿನಗದ್ದೆಯಲ್ಲಿ ಕೆಲಸವನ್ನೂ ನೀಡಲಾಗಿದೆ.
“ನಮಗೆ ಆರೆಸ್ಸೆಸ್ ಸ್ವಯಂಸೇವಕರು ಆಹಾರ ಮತ್ತು ವಸತಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಸುಮ್ಮನೆ ತಿನ್ನಲು ನಮಗೆ ಮನಸ್ಸಾಗಿಲ್ಲ. ಹೀಗಾಗಿ ಕೆಲಸ ಕೊಡುವಂತೆ ಕೇಳಿಕೊಂಡೆವು. ಈಗ ಕೆಲಸ ಮಾಡಿ ಸ್ವಾಭಿಮಾನದಿಂದ ತಿನ್ನುತ್ತಿದ್ದೇವೆ” ಎಂದು ಕಾರ್ಮಿಕರೊಬ್ಬರು ಹೇಳಿಕೊಂಡಿದ್ದಾರೆ.
ದೇಶದಾದ್ಯಂತ ಆರೆಸ್ಸೆಸ್ ಸ್ವಯಂಸೇವಕರು ಸೇವಾಕಾರ್ಯದಲ್ಲಿ ನಿರತರಾಗಿದ್ದಾರೆ. ಲಕ್ಷಾಂತರ ಜನರ ಹಸಿವು ನೀಗಿಸುವ ಕಾರ್ಯವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ರೈತರ ನೆರವಿಗೆ ಸ್ವಯಂಸೇವಕರು ಆಗಮಿಸಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಪೊಲೀಸರಿಗೆ ಮತ್ತು ಗರ್ಭಿಣಿಯರಿಗೆ ಎಳನೀರು ಕೊಡುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೊಂದಿಗೆ ಮುಸ್ಲಿಮರು ಮತ್ತು ಕ್ರೈಸ್ತರು ಕೈಜೋಡಿಸಿ ಸೇವೆಯನ್ನು ಮಾಡುತ್ತಿದ್ದಾರೆ. ಆರೆಸ್ಸೆಸ್ ಕೂಡ ಜಾತಿ ಮತ್ತು ಧರ್ಮದ ನೋಡದೇ ಪ್ರತಿಯೊಬ್ಬರಿಗೂ ಸೇವೆಯನ್ನು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.